ಕೈ ಸರ್ಕಾರ ವಿರುದ್ಧ ಜನರ ದಂಗೆ ಸನ್ನಿಹಿತ: ಕೆ.ಎಸ್.ಈಶ್ವರಪ್ಪ

| Published : May 31 2025, 12:05 AM IST / Updated: May 31 2025, 12:06 AM IST

ಕೈ ಸರ್ಕಾರ ವಿರುದ್ಧ ಜನರ ದಂಗೆ ಸನ್ನಿಹಿತ: ಕೆ.ಎಸ್.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಧರ್ಮ, ದೇಶ, ಸಂವಿಧಾನಕ್ಕೆ ನಿರಂತರವಾಗಿ ಅಪಚಾರ ಮಾಡುತ್ತಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಗೆಯೇಳುವ ಕಾಲ ದೂರವಿಲ್ಲ ಎಂದು ಬಿಜೆಪಿ ಮುಖಂಡ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.

ಕಾಂಗ್ರೆಸ್‌ ಕಚೇರಿಗಳಿಂದಲೇ ಕೋಮುವಾದ ಜನ್ಮ । ಕಾಂಗ್ರೆಸ್‌ ಸರ್ಕಾರದ ಪತನ ಆರಂಭ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಧರ್ಮ, ದೇಶ, ಸಂವಿಧಾನಕ್ಕೆ ನಿರಂತರವಾಗಿ ಅಪಚಾರ ಮಾಡುತ್ತಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಗೆಯೇಳುವ ಕಾಲ ದೂರವಿಲ್ಲ ಎಂದು ಬಿಜೆಪಿ ಮುಖಂಡ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಘಟನೆಗೆ ಕಾರಣರಾದ ಮುಸ್ಲಿಂ ಗೂಂಡಾಗಳ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು. ಇದೀಗ ಹೈಕೋರ್ಟ್ ಈ ರೀತಿ ವಾಪಸ್ ತೆಗೆದುಕೊಂಡಿರುವ ಸಚಿವ ಸಂಪುಟದ ತೀರ್ಮಾನ ಸರಿಯಲ್ಲ ಎಂದು ಛೀಮಾರಿ ಹಾಕಿದೆ ಎಂದು ಕುಟುಕಿದರು.

ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳ ಪರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದೇ ತಪ್ಪು. ಸಚಿವ ಸಂಪುಟ ಸಭೆ ಎಂದರೆ ಮಕ್ಕಳು ಗೋಲಿ ಆಟವಾಡುವ ಜಾಗವಲ್ಲ. ಈಗ ಹೈಕೋರ್ಟ್ ಈ ತೀರ್ಮಾನದ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಇದು ಮುಸ್ಲಿಂ ಗೂಂಡಾಗಳನ್ನು ರಕ್ಷಿಸುವ ತೀರ್ಮಾನವಾಗಿದೆ. ಅಲ್ಲದೇ, ಸಂವಿಧಾನಬಾಹಿರ ಕೂಡ. ಇನ್ನಾದರೂ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕು ಎಂದರು.

ಮಂಗಳೂರಿನಲ್ಲಿ ಅಬ್ದುಲ್ ಕೊಲೆ, ಸುಹಾಸ್ ಶೆಟ್ಟಿ ಕೊಲೆ ಇವುಗಳನ್ನು ನಾವು ಒಪ್ಪುವುದಿಲ್ಲ. ಮಂಗಳೂರಿನಲ್ಲಿ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದ ಹಿನ್ನೆಲೆ ಮುಸ್ಲಿಮರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈಗ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಎಚ್ಚೆತ್ತುಕೊಂಡಿದ್ದಾರೆ. ಸುಹಾಸ್ ಶೆಟ್ಟಿ ರೌಡಿಶೀಟರ್ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ ಹಾಗಾದ್ರೆ ನಟಿ ರನ್ಯಾ ರಾವ್‌ಗೆ ಹಣ ಕೊಟ್ಟಾಗ ಆಕೆ ಸ್ಮಗ್ಲಿಂಗ್ ಮಾಡುವವರು ಎಂದು ಗೋತ್ತಾಗಲಿಲ್ಲವೇ? ಎಂದು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕನ ಕೊಲೆಯಾಗಿದೆ. ಇದು ತಪ್ಪು. ಇದನ್ನು ಯಾರೂ ಒಪ್ಪುವುದಿಲ್ಲ. ಆದರೆ, ಈ ಹಿಂದೆ ಹಿಂದೂಗಳ ಕೊಲೆಗಳು ನಡೆದವಲ್ಲ, ಆಗ ಹೋರಾಟ ಮಾಡಿದವರೆಲ್ಲ ಎಲ್ಲಿ ಹೋಗಿದ್ದರು? ಮುಸ್ಲಿಂ ಮುಖಂಡರು ಈಗ ತಾವು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ ಎಂದ ಮೇಲೆ ಸರ್ಕಾರಕ್ಕೆ ಬುದ್ದಿ ಬರುತ್ತದೆಯೇ? ಹಿಂದೂಗಳ ಹತ್ಯೆಯಾದಾಗ ಇವರೆಲ್ಲ ಎಲ್ಲಿ ಹೋಗಿದ್ದರು? ಇದೆಲ್ಲಾ ಬಹಳ ದಿನ ಉಳಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಈಗ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮುವಾದ ತಡೆಗೆ ವಿಶೇಷ ಪೊಲೀಸ್ ಪಡೆ ರಚಿಸುತ್ತಿದೆ. ಇದಕ್ಕಾಗಿ ನಕ್ಸಲ್ ನಿಗ್ರಹ ಪಡೆಯನ್ನು ನಿಯೋಜಿಸಲಾಗುತ್ತಿದೆ. ಬಿ.ಕೆ.ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡಕ್ಕೆ ಕಳಿಸುತ್ತಾರಂತೆ. ಇದು ತೋಳದ ಕೈಗೆ ಕುರಿಯನ್ನು ಕೊಟ್ಟ ಹಾಗೇ ಆಗುತ್ತದೆ ಅಷ್ಟೇ. ಕೋಮುವಾದಗಳು ಕಾಂಗ್ರೆಸ್ ಕಚೇರಿಗಳಿಂದಲೇ ಹುಟ್ಟುತ್ತವೆ ಎಂದರು.

ಸರ್ಕಾರದಲ್ಲಿ ಈಗ ಗೊಂದಲಗಳು ಆರಂಭವಾಗಿವೆ. ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯಗಳು ಬಯಲಾಗಿವೆ. ಇದು ಕಾಂಗ್ರೆಸ್ ಪತನದ ಪ್ರಥಮ ಹೆಜ್ಜೆಯಾಗಿದೆ ಎಂದರು.

ಪ್ರಮುಖರಾದ ಮೋಹನ್ ಕುಮಾರ್ ಜಾಧವ್, ಲಕ್ಷ್ಮಿ ಶಂಕರನಾಯ್ಕ್, ಆರತಿ ಆ.ಮ. ಪ್ರಕಾಶ್, ಮಹೇಶ್ ಕುಮಾರ್, ಶಂಕರ್, ಕುಬೇರಪ್ಪ, ಸಕ್ರಾನಾಯ್ಕ್ ಮುಂತಾದವರು ಇದ್ದರು.

ಸರ್ಕಾರ ಯಾವಾಗ ಪತನ ಆಗುತ್ತೋ ಗೊತ್ತಿಲ್ಲ?

ರಾಜ್ಯ ಸರ್ಕಾರ ಯಾವಾಗ ಪತನ ಆಗುತ್ತೋ ಗೊತ್ತಿಲ್ಲ? ಎಂದು ವ್ಯಂಗ್ಯವಾಡಿದ ಅವರು, ಶಿವರಾಮ್ ಹೆಬ್ಬಾರ್ ಮತ್ತು ಸೋಮಶೇಖರ್ ಉಚ್ಚಾಟಣೆ ಬಗ್ಗೆ ಬಿಜೆಪಿ ಪಕ್ಷದ ಅಧ್ಯಕ್ಷರನ್ನು ಕೇಳಬೇಕು. ಮೊನ್ನೆ ನಡೆದ ಚುನಾವಣೆ ಸಂದರ್ಭದಲ್ಲಿ ಈ ಶಾಸಕರು ಪ್ರಚಾರಕ್ಕೆ ಹೋಗಿರಲಿಲ್ಲ. ಆಗ ರಾಜ್ಯಾಧ್ಯಕ್ಷ ಕಣ್ಮುಚ್ಕೊಂಡು ಕೂತಿದ್ರಾ? ಇವರು ತಮಗೆ ಇಷ್ಟ ಬಂದಾಗ ಸೇರಿಸಿಕೊಳ್ಳುತ್ತಾರೆ, ಬೇಡ ಅಂದಾಗ ಬಿಸಾಕ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.