ಸಾರಾಂಶ
ಭಟ್ಕಳ; ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆಯಲ್ಲಿ ಜನರು ಅವಹಾಲು ಸಲ್ಲಿಸಿ ಪರಿಹಾರಕ್ಕಾಗಿ ಸಚಿವರು ಹಾಗೂ ಅಧಿಕಾರಿಗಳನ್ನು ಆಗ್ರಹಿಸಿದರು.
ಸಭೆಯಲ್ಲಿ ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಐಆರ್ಬಿ ಕಂಪನಿ ಅರ್ಧಂಬರ್ಧ ಕಾಮಗಾರಿ ಮಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ, ಹೆದ್ದಾರಿಯಲ್ಲಿ ಸಂಚರಿಸಲು ಭಯವಾಗುತ್ತಿದೆ. ಕಾಮಗಾರಿ ಶುರುವಾಗಿ 10 ವರ್ಷ ಆದರೂ ಇನ್ನು ಮುಗಿಸಲು ಸಾಧ್ಯವಾಗಿಲ್ಲ. ಭಟ್ಕಳದಲ್ಲಿ ವಿಳಂಬಗತಿಯಲ್ಲಿ ಹೆದ್ದಾರಿ ಕಾಮಗಾರಿ ಆಗಲು ಕಾರಣವೇನು? ಇನ್ನೂ ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತದೆ. ಜನರು ಮತ್ತೆಷ್ಟು ವರ್ಷ ಸಮಸ್ಯೆ ಅನುಭವಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಐಆರ್ಬಿ ಬಗ್ಗೆ ಗರಂ ಆದ ಸಚಿವರೂ ಕಾಯ್ಕಿಣಿ, ಮೂಡಭಟ್ಕಳದಲ್ಲಿ ಅಂಡರಪಾಸ್ ಗಾಗಿ ಕಾಮಗಾರಿ ಸ್ಥಗಿತಗೊಂಡಿದ್ದರೂ ಉಳಿದ ಕಡೆ ಮುಗಿಸಲು ನಿಮಗೇನು ತೊಂದರೆ ಎಂದು ಖಾರವಾಗಿ ಐಆರ್ ಬಿ ಎಂಜಿನಿಯರರನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿಯೂ ಬಾಕಿ ಇರುವ ಕಡೆ ಕೆಲಸ ಶೀಘ್ರ ಆರಂಭಿಸಬೇಕು. ಸಾರ್ವಜನಿಕರಿಗೆ ಎಲ್ಲಿಯೂ ತೊಂದರೆ ಆಗಬಾರದು ಎಂದು ಸೂಚಿಸಿದರು.ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟ್ಯಾಪ್ ಏನೋ ವಿತರಿಸಲಾಗಿದೆ. ಅವರಿಗೆ ಸೂಕ್ತ ತರಬೇತಿ ಕೊಡಬೇಕು. ತರಬೇತಿ ಕೊಡದಿದ್ದರೆ ಪಹಣಿ ಪತ್ರಿಕೆ ಸೇರಿದಂತೆ ಕಂದಾಯ ದಾಖಲೆಗಳಲ್ಲಿ ಹೆಸರು ವ್ಯತ್ಯಾಸ ಆಗಿ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ. ಮಳೆಗಾಲದಲ್ಲಿ ಅನಾಹುತವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಾರುಕೇರಿಯಲ್ಲಿ ಮೂರ್ನಾಲ್ಕು ಬಾರಿ ಗುಡ್ಡ ಕುಸಿದು ದೊಡ್ಡ ಬಂಡೆ ಕೆಳಗೆ ಬಂದು ಬಿದ್ದಿದ್ದರೂ ತಾಲೂಕು ಆಡಳಿತ ಅದನ್ನು ತೆರವುಗೊಳಿಸುವ ಕೆಲಸ ಮಾಡಿಲ್ಲ ಎಂದು ಎಂ.ಡಿ. ನಾಯ್ಕ ಹೇಳಿದರು.
ಎಂಡೋಸಲ್ಫಾನ್ ಪೀಡಿತರಿಗೆ ಈ ಹಿಂದೆ ಮನೆ ಬಾಗಿಲಿಗೆ ಬಂದು ಔಷಧಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಆ ಪದ್ಧತಿ ಇದ್ದಂತೆ ಇಲ್ಲ. ಇದರಿಂದ ಎಂಡೋಸಲ್ಫಾನ್ ಪೀಡಿತರಿಗೆ ತೊಂದರೆಯಾಗಿದೆ. ಪೀಡಿತರಿಗೆ ಸರಿಯಾದ ಔಷಧ, ಚಿಕಿತ್ಸೆ ಸಿಗುವಂತಾಗಬೇಕೆಂದು ಎ.ಎಂ. ಮುಲ್ಲಾ ಹೇಳಿದರು.ಅದರಂತೆ ಅವರು ಗರ್ಭಿಣಿಯರಿಗೆ ನೀಡುವ ಆಹಾರ ಸರಿಯಾಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಸಚಿವರು ಒಮ್ಮೆ ಈ ಆಹಾರ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕುತ್ತರಿಸಿದ ಸಚಿವರು, ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಆರೋಗ್ಯ ಶಿಬಿರ ನಡೆಸಿ ಸೌಲಭ್ಯ ಕೊಡಿಸಿದ್ದೆ. ಇದೀಗ ಮತ್ತೆ ಶಾಸಕನಾದ ನಂತರ ಶಿರಾಲಿಯಲ್ಲಿ ಶಿಬಿರ ನಡೆಸಿ ಮತ್ತೆ 850 ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸೌಲಭ್ಯ ಕೊಡುವ ಕೆಲಸ ಮಾಡಲಾಗಿದೆ ಎಂದರು.
ಗರ್ಭಿಣಿಯರಿಗೆ ಕೊಡುವ ಆಹಾರದಲ್ಲಿ ವ್ಯತ್ಯಾಸ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಮಿಕ ಮುಖಂಡ ಜಿ.ಎನ್. ರೇವಣಕರ, ಅರ್ಹ ಕಾರ್ಮಿಕರಿಗೆ ಗುರುತಿನ ಚೀಟಿ ಕೊಡಲು ಸತಾಯಿಸಲಾಗುತ್ತಿದೆ. ಇದರಿಂದ ಕೆಲವು ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗಿದ್ದಾರೆಂದು ದಾಖಲೆ ಸಮೇತ ಸಚಿವರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಕಾರ್ಮಿಕ ನಿರೀಕ್ಷಕರಿಗೆ ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಶಿರಸಿಯ ಇಟಗುಳಿಯ ವೃದ್ದರೊಬ್ಬರು, ಸಚಿವರ ಬಳಿ ನಾನು ಕಂದಾಯ ಭೂಮಿಯಲ್ಲಿದ್ದು, ನನಗೆ ಮನೆ ಕಟ್ಟಿಕೊಡಲು ಅನುಮತಿ ಕೊಡಬೇಕು. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನನ್ನ ಪತ್ನಿ ಅನಾರೋಗ್ಯ ಪೀಡಿತೆಯಾಗಿದ್ದು, 1 ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ. ನಮ್ಮ ನಂತರ ಈ ಜಾಗ ಸರ್ಕಾರವೇ ತೆಗೆದುಕೊಳ್ಳಲಿ ಎಂದಾಗ, ಸಚಿವರು ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಒಂದೊಮ್ಮೆ ಆಗದಿದ್ದರೆ ನಾನೇ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.ಪುರಸಭೆ ಮಾಜಿ ಸದಸ್ಯ ಕೆ.ಎಂ. ಅಸ್ಪಾಕ್ ಮಾತನಾಡಿ, ಭಟ್ಕಳದಲ್ಲಿ ಅತೀ ಅಗತ್ಯವಾದ ಪಾಸ್ಪೋರ್ಟ್ ಕಚೇರಿ, ಆರ್ಟಿಒ ಕಚೇರಿ ಆಗಬೇಕು. ಹೆದ್ದಾರಿ ಕೆಲಸ ತ್ವರಿತಗತಿಯಲ್ಲಿ ಆಗಲು ಕ್ರಮ ಕೈಗೊಳ್ಳಬೇಕು. ತಾಲೂಕು ಆಡಳಿತ ಸೌಧದಲ್ಲಿ ಝೆರಾಕ್ಸ ಸೆಂಟರ್ ಮತ್ತು ಕ್ಯಾಂಟೀನ್ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಬಂದರ ರಸ್ತೆಯ ಈದ್ಗಾ ಪ್ರಾರ್ಥನಾ ಸ್ಥಳದ ಸನಿಹದಲ್ಲಿ ಮೂತ್ರ ವಿಸರ್ಜನೆ ಸೇರಿದಂತೆ ಗಲೀಜು ಮಾಡಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ರಸ್ತೆ, ಗಟಾರ, ಶಿಕ್ಷಣಕ್ಕೆ ಸಹಾಯ, ಮದುವೆಗೆ ಸಹಾಯ, ಉದ್ಯೋಗ, ಕಂದಾಯ ದಾಖಲೆಗಳು, ಅರಣ್ಯ ಭೂಮಿ ಅತಿಕ್ರಮಣ, ವಿದ್ಯುತ್, ಕಸ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನರು ಮನವಿ ಸಲ್ಲಿಸಿದರು. ಸಭೆಯಲ್ಲಿ 111 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ್ದೇ ಹೆಚ್ಚು ಅರ್ಜಿ ಇದ್ದವು. ಭಟ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಆಗಮಿಸಿ ಸಮಸ್ಯೆ ಹೇಳಿಕೊಂಡರು.