ಸಾರಾಂಶ
ಹಗರಿಬೊಮ್ಮನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ದೇಶದ ಸಾಲವನ್ನು ₹೧೮೭ ಲಕ್ಷ ಕೋಟಿಗೆ ತಲುಪಿಸಿ ದೇಶದ ಆರ್ಥಿಕತೆಯನ್ನು ಅಧಃಪತನಕ್ಕೆ ತಳ್ಳಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅಶೋಕ ಫಾರ್ಮ್ ಹೌಸ್ನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯ ಸರ್ಕಾರ ಜನರಿಗೆ ಮಾಡಿದ ಸಹಾಯಕ್ಕೆ ಋಣ ತೀರಿಸುವ ಅವಕಾಶ ಒದಗಿ ಬಂದಿದೆ. ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಋಣ ತೀರಿಸಬೇಕಿದೆ. ದೇಶದ ಸ್ಥಿತಿಯನ್ನು ಯುವಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ ಬಂಡವಾಳಶಾಹಿಗಳ ಸಾಲಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರೈತರ ಸಂಕಷ್ಟಗಳ ಅರಿವಿಲ್ಲ. ನಾನು ಎಂಕಾಂ ಓದಿರುವೆ. ಆದರೆ, ದೇಶದ ಪ್ರಧಾನಿ ಮೋದಿ ವಿದ್ಯಾಭ್ಯಾಸವೇನು ಎಂಬುದು ಯಾರಿಗೂ ಈವರೆಗೂ ತಿಳಿದಿಲ್ಲ. ಅವರ ಕ್ವಾಲಿಫಿಕೇಶನ್ನ್ನೆ ಮುಚ್ಚಿಟ್ಟಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಹಲವು ಕೊಡುಗೆ ನೀಡಿದೆ. ಬಸವಣ್ಣ ಕಂಡ ಕನಸನ್ನು ಕಾಂಗ್ರೆಸ್ ನನಸು ಮಾಡಿದೆ. ನಾನು ತಕ್ಕಡಿ ತೂಕದ ರಾಮ, ತೂಕ ಹಾಕಿ ಎಲ್ಲರಿಗೂ ಸರಿಯಾದ ನ್ಯಾಯ ನೀಡುತ್ತೇನೆ. ಪ್ರಧಾನಿಯವರ ಅಜ್ಞಾನದ ಡಿಮಾನೀಟೇಶನ್ನಿಂದ ಜನರು ಬೀದಿಗೆ ಬಂದಿದ್ದಾರೆ. ಸಂಡೂರು ಜನರ ಮನದಲ್ಲಿ ಉಳಿದು ಸತ್ಯ, ಧರ್ಮ, ನೆಲ, ಜಲ ಉಳಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿ ರೈತರ ₹೮೧೬೫ ಕೋಟಿ ಸಾಲವನ್ನು ಮನ್ನಾ ಮಾಡಿ ರೈತರ ಬದುಕನ್ನು ಹಸನಾಗಿಸಿದ್ದಾರೆ. ಶ್ರೀರಾಮುಲು ಸುಳ್ಳಿನ ಸರದಾರ, ತುಕಾರಾಮ ಸತ್ಯ ನಿಷ್ಠೆ ಪ್ರಾಮಾಣಿಕ ವ್ಯಕ್ತಿ. ಶ್ರೀರಾಮುಲು ಅವರ ಹೊಡಿಬಡಿ ಸಂಸ್ಕೃತಿಯನ್ನು ಜಿಲ್ಲೆಯ ಜನತೆ ಮರೆತಿಲ್ಲ ಎಂದರು.ಈ ಸಂದರ್ಭದಲ್ಲಿ ಡಿಸಿಸಿ ಗ್ರಾಮೀಣ ಅಧ್ಯಕ್ಷ ಬಿ.ವಿ.ಶಿವಯೋಗಿ, ಜಿಪಂ ಮಾಜಿ ಸದಸ್ಯರಾದ ರೋಗಾಣಿ ಹಲುಗಪ್ಪ, ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾಹಿರಾಬಾನು, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಯಶೋದಾ ಮಂಜುನಾಥ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಚ್.ಎಂ.ನೂರಿ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಪುರಸಭೆ ಸದಸ್ಯರಾದ ಮರಿರಾಮಪ್ಪ, ಪವಾಡಿ ಹನುಮಂತಪ್ಪ, ಸೆರೆಗಾರ ಹುಚ್ಚಪ್ಪ, ಗುಂಡ್ರು ಹನುಮಂತಪ್ಪ, ರಾಜೇಶ್ ಬ್ಯಾಡಗಿ, ಗೌರಜ್ಜನವರ ಗಿರೀಶ್, ಆನಂದೇವನಹಳ್ಳಿ ಪ್ರಭು ಇತರರಿದ್ದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ನಂದಿಬಂಡಿ ಸೋಮಣ್ಣ, ಪತ್ರೇಶ್ ಹಿರೇಮಠ, ಸೊನ್ನದ ಗುರುಬಸವರಾಜ ನಿರ್ವಹಿಸಿದರು.