ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಶ್ರೀ ಕ್ಷೇತ್ರ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಳದ ಜೀರ್ಣೋದ್ಧಾರ ಪ್ರಯುಕ್ತ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಂಗವಾಗಿ ಶನಿವಾರ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಬಿಂಬ ಶುದ್ಧಿ ಮತ್ತಿತರ ಧಾರ್ಮಿಕ ಪೂಜಾನುಷ್ಠಾನಗಳು ಸಂಪನ್ನಗೊಂಡವು.ದೇವಳದ ತಂತ್ರಿಗಳಾದ ಪುತ್ತೂರು ಮಧುಸೂದನ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ಪುಣ್ಯಾಹವಾಚನ, ಗಣಯಾಗ, ಸಂಜೀವಿನಿ ಮೃತ್ಯುಂಜಯ ಯಾಗ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಹೋಮಗಳು, ಶಾಂತಿ ಹೋಮ, ಕಲಶಾಭಿಷೇಕ, ಮಹಾಪೂಜೆಗಳು ನಡೆಸಲಾಯಿತು. ಸಂಜೆ ಶ್ರೀ ಶಾಸ್ತಾರ, ಶ್ರೀ ನಾಗದೇವರು, ಶ್ರೀ ಭೂತರಾಜರು ಮತ್ತು ರಕ್ತೇಶ್ವರಿ ದೇವರುಗಳ ಸನ್ನಧಿಯಲ್ಲಿ ಕಲಶಾಧಿವಾಸ, ಅಧಿವಾಸ ಹೋಮಗಳು ಮತ್ತು ರಾತ್ರಿ ಪೂಜೆಗಳನ್ನು ನಡೆಸಲಾಯಿತು.ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಊರಪರವೂರು ಸಾವಿರಾರು ಮಂದಿ ಅನ್ನಪ್ರಸಾದವನ್ನು ಸ್ವೀಕರಿಸಿದರು.ಸಂಜೆ ಯಕ್ಷಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಮಂಗಳೂರಿನ ಸನಾತನ ಯಕ್ಷಾಲಯ ಸಂಸ್ಥೆಯ ಕಲಾವಿದರಿಂದ ಗಜೇಂದ್ರ ಮೋಕ್ಷ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಿತು. ಇದಕ್ಕೆ ಮೊದಲು ಖ್ಯಾತ ಹಿನ್ನೆಲೆ ಸಂಗೀತ ವಾದಕರಾದ ವೀಕ್ಷಿತ್ ಕೊಡಂಚ ಮತ್ತು ಬಳಗದಿಂದ ಭಕ್ತಿ ಗಾನ ಸಿಂಚನ ಪ್ರಸ್ತುತಗೊಂಡಿತು.ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೆರ್ಣಂಕಿಲ ಹರಿದಾಸ ಭಟ್, ಪ್ರ.ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ, ಮಠದ ಕಾ.ನಿ.ಅಧಿಕಾರಿ ಸುಬ್ರಹಣ್ಯ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.ಮಾ.25ರಂದು ಶ್ರೀಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ಮತ್ತು 28ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕಗಳು ವೈಭವದಿಂದ ನಡೆಯಲಿವೆ.