ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರು ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯುವಂತೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಿ, ರೈತರನ್ನು ಮನವೊಲಿಸಿ ಬೆಳೆವಿಮೆ ವ್ಯಾಪ್ತಿಗೆ ಒಳಡಿಸಬೇಕೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿಂದು ಬೆಳೆ ವಿಮೆ ಯೋಜನೆ ಅನುಷ್ಠಾನ ಕುರಿತು ಜರುಗಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ಯಾವುದೇ ಅರ್ಹ ರೈತರು ವಿಮೆಯಿಂದ ವಂಚಿತರಾಗದಂತೆ ಬ್ಯಾಂಕುಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು ನೀಡಿದ ಬೆಳೆಸಾಲ ಪಡೆದ ರೈತರನ್ನು ವಿಮೆ ವ್ಯಾಪ್ತಿಗೆ ಒಳಪಡಿಸುವ ಕಾರ್ಯವಾಗಬೇಕು. ಕಳೆದ ಸಾಲಿನ ಹಂಗಾಮಿನಲ್ಲಿ 22 ಸಾವಿರಕ್ಕೂ ಹೆಚ್ಚು ರೈತರು ಬೆಳೆ ವಿಮೆಗೆ ಒಳಪಡಿಸಿದ್ದರು. ಈ ಹಂಗಾಮಿನಲ್ಲಿ ಅದಕ್ಕೂ ಹೆಚ್ಚು ವಿಮೆಗೆ ನೋಂದಣಿಗೆ ಕ್ರಮವಹಿಸಲು ಸೂಕ್ತ ನಿರ್ದೇಶನ ನೀಡಿದರು. ಪ್ರತಿಯೊಂದು ಬ್ಯಾಂಕ್ಗಳು ಸಾಲ ಪಡೆದಿರುವ ರೈತರನ್ನು ಮನವೊಲಿಸಿ ಬೆಳೆವಿಮೆ ನೋಂದಣಿಗೆ ಕ್ರಮವಹಿಸಲು ತಿಳಿಸಿದರು. ಈ ಬಗ್ಗೆ ಪ್ರತಿದಿನ ಪ್ರಗತಿಯ ಬಗ್ಗೆ ಗಮನ ಹರಿಸಲಾಗುವುದೆಂದು ತಿಳಿಸಿದರು.ಕೃಷಿ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ಹೆಸರು, ಸೋಯಾ ಅವರೆ ಹಾಗೂ ಉದ್ದು ಬೆಳೆಗೆ ವಿಮೆ ಕಂತು ಪಾವತಿಗೆ ಜುಲೈ 15 ಕೊನೆಯ ದಿನವಾದರೆ, ಅರಿಶಿಣ, ಸೂರ್ಯಕಾಂತಿ, ಸಜ್ಜೆ, ಮುಸುಕಿನ ಜೋಳ, ಜೋಳ, ತೊಗರಿ, ಶೇಂಗಾ, ಎಳ್ಳು (ಮ.ಆ), ಕೆಂಪು ಮೆಣಸಿನಕಾಯಿ, ಮುಸುಕಿನ ಜೋಳ, ಸಜ್ಜೆ, ತೊಗರಿ, ಶೇಂಗಾ (ನೀರಾವರಿ) ಬೆಳೆಗಳಿಗೆ ಜುಲೈ 31 ಹಾಗೂ ಸೂರ್ಯಕಾಂತಿ, ಈರುಳ್ಳಿ (ನೀರಾವರಿ), ಈರುಳ್ಳಿ, ಕೆಂಪು ಮೆಣಸಿನಕಾಯಿ (ಮ.ಆ) ಬೆಳೆಗಳಿಗೆ ವಿಮೆ ಕಂತು ಪಾವತಿಗೆ ಆಗಸ್ಟ್ 14 ಆಗಿರುತ್ತದೆ ಎಂದರು.
ಈ ವೇಳೆ ವಿವಿಧ ಬೆಳೆ ವಿಮೆಯ ಪ್ರಚಾರದ ಪೋಸ್ಟರಗಳನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಬಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ನೀಲಪ್ಪನವರ, ಜಿಲ್ಲಾ ಅಗ್ರಣಿ ಬ್ಯಾಂಕ್ನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಸಹಕಾರ ಇಲಾಖೆಯ ಉಪನಿಬಂಧಕ ದಾನಯ್ಯ ಹಿರೇಮಠ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.ಗ್ರಾಮ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆಯ ಮಹತ್ವ, ನೋಂದಣಿ ವಿಧಾನ, ಕೊನೆಯ ದಿನಾಂಕ ಹಾಗೂ ಯೋಜನೆಯ ಪ್ರಯೋಜನಗಳ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಬ್ಯಾಂಕುಗಳು ಬೆಳೆಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ವಿಮೆ ನೋಂದಣಿ ಪ್ರಕ್ರಿಯೆಯನ್ನು ನಿಯಮಾನುಸಾರ ಪೂರ್ಣಗೊಳಿಸಬೇಕು. ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಜಿಲ್ಲೆಯಲ್ಲಿ ಶೇ.100 ರಷ್ಟು ಅರ್ಹ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.
-ಗಜಾನನ ಬಾಲೆ, ಜಿ.ಪಂ ಸಿಇಒ