ಭತ್ತದ ಬೆಳೆಗೆ ಕೀಟಬಾಧೆ<bha>;</bha> ಫಸಲು ನಷ್ಟದ ಆತಂಕದಲ್ಲಿ ರೈತರು
KannadaprabhaNewsNetwork | Published : Oct 13 2023, 12:15 AM IST
ಭತ್ತದ ಬೆಳೆಗೆ ಕೀಟಬಾಧೆ<bha>;</bha> ಫಸಲು ನಷ್ಟದ ಆತಂಕದಲ್ಲಿ ರೈತರು
ಸಾರಾಂಶ
ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಭತ್ತ ಬೇಸಾಯದ ಕಾಯಕದಲ್ಲಿ ಪ್ರತಿವರ್ಷ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷದ ಮುಂಗಾರಿನಲ್ಲಿ ಮಳೆ ವಿಳಂಬವಾದ ಕಾರಣ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಮಾಡಲು ಹಲವು ಸಮಸ್ಯೆಗಳ ಮಧ್ಯೆಯೂ ಭತ್ತದ ನಾಟಿ ಕಾರ್ಯಗಳನ್ನ ಮುಗಿಸಿದರು. ಆದರೆ ಈಗ ಭತ್ತದ ಬೆಳೆಗೆ ಕೀಟ ಬಾಧೆ ಕಾಡುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.
ಎಚ್.ಆರ್. ಹರೀಶ್ ಕನ್ನಡಪ್ರಭ ವಾರ್ತೆ ಶನಿವಾರಸಂತೆ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ಕೀಟಗಳ ಬಾಧೆ ಕಾಡುತ್ತಿದ್ದು, ರೈತರಿಗೆ ಬೆಳೆ ನಷ್ಟದ ಭೀತಿ ಕಾಡುತ್ತಿದ್ದು, ಕೈಗೆ ಬಂದಿರುವ ಫಸಲು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಭತ್ತ ಬೇಸಾಯದ ಕಾಯಕದಲ್ಲಿ ಪ್ರತಿವರ್ಷ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷದ ಮುಂಗಾರಿನಲ್ಲಿ ಮಳೆ ವಿಳಂಬವಾದ ಕಾರಣ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಮಾಡಲು ಹಲವು ಸಮಸ್ಯೆಗಳ ಮಧ್ಯೆಯೂ ಭತ್ತದ ನಾಟಿ ಕಾರ್ಯಗಳನ್ನ ಮುಗಿಸಿದರು. ಆದರೆ ಈಗ ಭತ್ತದ ಬೆಳೆಗೆ ಕೀಟ ಬಾಧೆ ಕಾಡುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ಪಡೆದಿದ್ದರು. ಈಗ ಬಂದಿರುವ ಕೀಟಬಾಧೆಗಳ ನಿಯಂತ್ರಣಕ್ಕೆ ಉಚಿತವಾಗಿ ಔಷಧಿ ವಿತರಿಸುವಂತ ರೈತರು ಆಗ್ರಹಿಸುತ್ತಿದ್ದಾರೆ. ಇನ್ನು ಕೆಲವು ರೈತರು ಖಾಸಗಿ ವ್ಯಾಪಾರ ಸಂಸ್ಥೆಯಿಂದ ದುಬಾರಿ ವೆಚ್ಚದಲ್ಲಿ ಔಷಧಿಯನ್ನು ಖರೀದಿಸಿ ಭತ್ತದ ಗದ್ದೆಗಳಿಗೆ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಮಳೆ ವಿಳಂಬದಿಂದ ಸಮಸ್ಯೆ: ಕೊಡ್ಲಿಪೇಟೆ ಮತ್ತು ಶನಿವಾರಸಂತೆಯ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ಮಳೆ ವಿಳಂಬವಾದ ಕಾರಣ ಈ ವರ್ಷ ಭತ್ತದ ನಾಟಿ ಮಾಡದೆ ಗದ್ದೆಗಳನ್ನು ಹಾಗೆ ಪಾಳುಬಿಟ್ಟಿದ್ದಾರೆ. ಸಮೀಪದ ಕುಜಗೆರಿ, ಕಾಜೂರು, ಮಾದ್ರೆ, ದಂಡಳ್ಳಿ ಭಾಗದ ಗ್ರಾಮದ ಬಿತ್ತನೆ ಮಾಡಿದ ಸಸಿ ಮಡಿಗಳ ಗದ್ದೆಗಳಿಗೆ ಕಾಡಾನೆ ಹಾವಳಿ ಮಾಡಿ ಭತ್ತದ ಸಸಿ ಮಡಿಗಳನ್ನೇ ನಾಶಪಡಿಸಿದ್ದರಿಂದ ರೈತರು ಬೇರೆ ಭಾಗದಿಂದ ಸಸಿಗಳನ್ನು ತಂದು ನಾಟಿ ಮಾಡಿದ್ದರು. ಈ ವರ್ಷ ಮಳೆ ತೀರಾ ಕಡಿಮೆಯಾಗಿದ್ದು ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ಯಾವುದೇ ಸೌಲತ್ತುಗಳು ಮತ್ತು ಮಾಹಿತಿಗಳನ್ನು ಪ್ರತಿ ರೈತರ ಗದ್ದೆಗೆ ಭೇಟಿ ನೀಡದೆ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ. ಒಂದು ಹೆಕ್ಟೇರ್ ಭತ್ತ ಬೇಸಾಯ ಮಾಡಿದರೆ 22 ರಿಂದ 25 ಕ್ವಿಂಟಲ್ ಭತ್ತದ ಇಳುವರಿ ಪ್ರತಿ ವರ್ಷ ಪಡೆಯಬಹುದು. ಆದರೆ ಈ ವರ್ಷ ಕೀಟ ಬಾಧೆಯಿಂದಾಗಿ 14 ರಿಂದ 15 ಕ್ವಿಂಟಲ್ ಭತ್ತ ಇಳುವರಿ ಪಡೆಯುವುದೇ ಕಷ್ಟ ಸಾಧ್ಯ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ಈಗಾಗಲೇ ಕೀಟಗಳ ಬಾಧೆ ನಿಯಂತ್ರಣಕ್ಕೆ 2-3 ಬಾರಿ ಔಷಧಿ ಸಿಂಪಡಣೆ ಮಾಡಿದರೂ ಕೀಟಗಳು ಹತೋಟಿಗೆ ಬರುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ ಪಡೆದಂತಹ ರೈತರ ಮತ್ತು ಭತ್ತದ ಬೇಸಾಯವನ್ನು ಮಾಡಿದ ರೈತರ ಭೂಮಿಗಳಿಗೆ ಭೇಟಿ ನೀಡಿ ಅಲ್ಲಿ ಕೀಟಬಾಧೆ ಬಂದಿರುವ ಬೆಳೆಗಳ ವಿಕ್ಷೀಸಿ. ಕೀಟಗಳ ನಿಯಂತ್ರಣಕ್ಕೆ ಔಷಧಿ ವಿತರಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಈ ಭಾಗದ ರೈತರು ಭತ್ತ ಬೇಸಾಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ವಿರಳವಾಗುತ್ತಿದೆ. ಎಲ್ಲ ರೈತರು ಗದ್ದೆಗಳನ್ನು ಅಡಕೆ ಮತ್ತು ಕಾಫಿ ತೋಟಗಳಾಗಿ ಪರಿವರ್ತಿಸುತ್ತಿದ್ದಾರೆ. ಕೆಲವು ರೈತರು ಭತ್ತದ ಬೇಸಾಯ ಮಾಡಲು ಆಸಕ್ತಿ ಹೊಂದಿದ್ದಾರೆ. ಅಂತಹ ರೈತರನ್ನು ಸರ್ಕಾರ ಮತ್ತು ಕೃಷಿ ಇಲಾಖೆ ಪ್ರೋತ್ಸಾಹಿಸಬೇಕಾಗಿದೆ. ಈಗ ಭತ್ತದ ಪೈರಿಗೆ ಬಂದಿರುವ ಕೀಟಗಳ ಬಾಧೆ ನಿಯಂತ್ರಣಕ್ಕೆ ಕೃಷಿ ಇಲಾಖೆ ಮುಂದಾಗಬೇಕು. ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಉಚಿತವಾಗಿ ಔಷಧಿ ಸಿಂಪಡಣೆ ಮಾಡವ ವ್ಯವಸ್ಥೆ ಮಾಡಬೇಕು ಎಚ್.ಆರ್.ಸುರೇಶ್, ಅಧ್ಯಕ್ಷರು, ಕೃಷಿ ಪತ್ತಿನ ಸಹಾಕರಿ ಸಂಘ, ಗೌಡಳ್ಳಿ --- ಈ ವರ್ಷದ ಮಳೆ ಕಡಿಮೆ ಬಂದಿರುವುದರಿಂದ ಭತ್ತದ ಗದ್ದೆಗಳಿಗೆ ಕೀಟಗಳು ಆವರಿಸಿವೆ. ಈಗಾಗಲೇ ಮಾಹಿತಿ ನೀಡಿದ ರೈತರ ಗದ್ದೆಗಳಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಸಹಾಯಧನದಲ್ಲಿ ಔಷಧಿ ವಿತರಣೆಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುತ್ತಿದೆ. ಹೆಚ್ಚುವರಿ ಔಷಧಿ ಅವಶ್ಯಕತೆ ಇದ್ದಲ್ಲಿ ಮಡಿಕೇರಿಯ ಕೃಷಿ ಇಲಾಖೆಯ ಕೇಂದ್ರದಿಂದ ಹೆಚ್ಚು ವ್ಯವಸ್ಥೆಯನ್ನು ಎಲ್ಲ ಲ ರೈತ ಸಂಪರ್ಕ ಕೇಂದ್ರಗಳಿಗೆ ಮಾಡಲಾಗುವುದು. ರೈತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು - ಯಾದವ ಬಾಬು, ಸಹಾಯಕ ಕೃಷಿ ನಿರ್ದೇಶಕರು, ಸೋಮವಾರಪೇಟೆ ಪ್ರತಿ ವರ್ಷವೂ ನಮ್ಮ ಗದ್ದೆಗಳಲ್ಲಿ ಭತ್ತದ ನಾಟಿಯನ್ನು ಮಾಡುತ್ತೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೀಟಗಳ ಬಾಧೆ ಅತಿ ಹೆಚ್ಚು ಬಂದಿದೆ. ಕೀಟಗಳ ನಿಯಂತ್ರಣಕ್ಕೆ ಎರಡು ಬಾರಿ ಔಷಧಿ ಸಿಂಪಡಣೆಯನ್ನು ಮಾಡಲಾಗಿದೆ. ಮಳೆ ಇಲ್ಲದೆ ಭತ್ತದ ಪೈರಿಗೆ ಕೀಟಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವರ್ಷದ ಉತ್ತಮ ಫಸಲು ಪಡೆಯಲು ಸಾಧ್ಯತೆ ಕಡಿಮೆ ಇದೆ. ಕೃಷಿ ಇಲಾಖೆಯಿಂದ ರೈತರಿಗೆ ಉಚಿತವಾಗಿ ಔಷಧಿ ನೀಡಿದರೆ ಭತ್ತದ ಪೈರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ - ಹೇಮಾ ಕುಮಾರ್, ರೈತ, ಚಿಕ್ಕಾರ-ಗೌಡಳ್ಳಿ ಗ್ರಾಮ .