ಕನ್ನಡಪ್ರಭ ವಾರ್ತೆ ಕುಮಟಾಕೇಂದ್ರ ನಾಗರಿಕ ಸೇವೆಗಳ(ಪಿಂಚಣಿ) ನಿಯಮಗಳ ಮಾನ್ಯತೆ ಕಾಯಿದೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿನ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಬುಧವಾರ ಗ್ರೇಡ್ ೨ ತಹಸೀಲ್ದಾರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರವು ವರ್ಷದ ಹಿಂದೆ ಅಂಗೀಕರಿಸಿದ ಪಿಂಚಣಿ ಮಾನ್ಯತೆ ಕಾಯಿದೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಲ್ಲಿ ನಿವೃತ್ತಿಯ ದಿನಾಂಕವನ್ನು ಪಿಂಚಣಿದಾರರ ವರ್ಗೀಕರಣ ಹಾಗೂ ಪಿಂಚಣಿ ಅರ್ಹತೆಯ ಆಧಾರದಂತೆ ನಡೆಯುತ್ತದೆ. ಇದರಿಂದ ಕೇಂದ್ರ ವೇತನ ಆಯೋಗ ಅಥವಾ ಯಾವುದೇ ವೇತನ ಆಯೋಗದ ಕಾರ್ಯಾಚರಣೆ ಅವಧಿಗೆ ಮೊದಲು ನಿವೃತ್ತರಾದ ಪಿಂಚಣಿದಾರರು ವೇತನ ಆಯೋಗದ ಶಿಫಾರಸುಗಳ ಲಾಭ ಕಳೆದುಕೊಳ್ಳುತ್ತಾರೆ. ಈ ಕಾಯಿದೆ ಪ್ರಕಾರ ೧-೧-೨೦೨೬ಕ್ಕೆ ಮೊದಲು ನಿವೃತ್ತರಾದ ಪಿಂಚಣಿದಾರರಿಗೆ ನಷ್ಟ ಉಂಟು ಮಾಡುತ್ತಿದೆ. ಪಿಂಚಣಿದಾರರು ಪಿಂಚಣಿ ಹೆಚ್ಚಳದ ಹಕ್ಕು ಇಲ್ಲದೇ ನಷ್ಟ ಅನುಭವಿಸುವಂತಾಗುತ್ತದೆ. ಪಿಂಚಣಿದಾರರ ನಡುವೆ ಸಮಾನತೆ ಇರಬೇಕು ಎಂದು ೭ ಕೇಂದ್ರ ವೇತನ ಆಯೋಗದ ಶಿಫಾರಸಿಗೆ ವಿರುದ್ಧವಾಗಿದೆ. ಇದು ನಾಗರಿಕರ ನ್ಯಾಯ ಮತ್ತು ಸಾಮಾಜಿಕ ಭದ್ರತೆಯ ಧ್ಯೇಯಕ್ಕೆ ಹಾಗೂ ಭಾರತದ ಉನ್ನತ ನ್ಯಾಯಾಲಯದ ತೀರ್ಪಿಗೆ ವಿರುದ್ಧ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಕಾಯಿದೆಯ ಅನಿಷ್ಟ ಪರಿಣಾಮಗಳ ಕುರಿತು ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಕಾಯಿದೆ ಅಂಗೀಕೃತಗೊಂಡ ವರ್ಷ ಪೂರ್ಣಗೊಂಡ ದಿನವಾಗಿ ಮಾ. ೨೫ರಂದೇ ದೆಹಲಿಯ ಆಲ್ ಇಂಡಿಯಾ ಸ್ಟೇಟ್ ಪಿಂಚಣಿದಾರರ ಫೆಡರೇಷನ್ ಅಡಿಯಲ್ಲಿ ಇಂದು ವಿರೋಧ ದಿನವಾಗಿ ಆಚರಿಸುತ್ತಿದ್ದೇವೆ. ಪಿಂಚಣಿ ಮಾನ್ಯತೆ ಕಾಯಿದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಎಸ್. ನಾಯ್ಕ, ಉಪಾಧ್ಯಕ್ಷ ಕೃಷ್ಣ ತಾಂಡೇಲ, ವಿ.ಆರ್. ನಾಯ್ಕ, ದಯಾನಂದ ಶೇಟ, ವಿಠ್ಠಲ ಜಿ. ಗುನಗಾ, ಜಿ.ವಿ. ನಾಯ್ಕ, ಎಂ.ಸಿ. ನಾಯ್ಕ, ವಿ.ಎಂ. ಭಟ್, ಶ್ರೀಕಾಂತ ಭಟ್, ಶಾಂತಾರಾಮ ಮಡಿವಾಳ, ವಿಶ್ವನಾಥ ಆರ್. ನಾಯ್ಕ, ಎಸ್.ಡಿ. ನಾಯ್ಕ, ಸಿ.ಜೆ. ಪಟಗಾರ, ಎಸ್.ಐ. ನಾಯ್ಕ, ವಿ.ಪಿ. ಭಟ್, ಜಿ.ಎಲ್. ನಾಯ್ಕ, ಎಸ್.ಡಿ. ಪಾಲೇಕರ, ಎನ್.ಜಿ. ಭಟ್, ಜಿ.ವಿ. ನಾಯ್ಕ ಇತರರು ಇದ್ದರು.