ಸಾರಾಂಶ
ಕೊಪ್ಪಳ ರೈಲು ನಿಲ್ದಾಣಕ್ಕೆ ‘ಶ್ರೀ ಗವಿಸಿದ್ದೇಶ್ವರ ರೈಲು ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕೊಪ್ಪಳ ನಗರದ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು ಸಂಸದ ರಾಜಶೇಖರ ಹಿಟ್ನಾಳರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಪ್ರಾಮಾಣಿಕ ಪ್ರಯತ್ನ; ಸಕಾರತ್ಮಕವಾಗಿ ಸ್ಪಂದಿಸಿದ ಸಂಸದ ಹಿಟ್ನಾಳಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ರೈಲು ನಿಲ್ದಾಣಕ್ಕೆ ‘ಶ್ರೀ ಗವಿಸಿದ್ದೇಶ್ವರ ರೈಲು ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕೊಪ್ಪಳ ನಗರದ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು ಸಂಸದ ರಾಜಶೇಖರ ಹಿಟ್ನಾಳರಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ನೂರಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.
ವಾಣಿಜ್ಯೋದ್ಯಮಿ ಮತ್ತು ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಶ್ರೀ ಗವಿಸಿದ್ಧೇಶ್ವರ ನೆಲ, ಇಲ್ಲಿನ ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರರು, ಕೊಪ್ಪಳದ ಹಲವು ಸಂಘ-ಸಂಸ್ಥೆಗಳು ಒಕ್ಕೊರಲಿನಿಂದ ಇಲ್ಲಿ ಬಂದಿದ್ದೇವೆ. ಮಹಾಮಹಿಮನಾದ ಶ್ರೀ ಗವಿಸಿದ್ಧೇಶ್ವರರ ಹೆಸರನ್ನು ಕೊಪ್ಪಳದ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು.ಸಾಹಿತಿ ಸಾವಿತ್ರಿ ಮುಜುಂದಾರ್ ಮಾತನಾಡಿ, ಶ್ರೀ ಗವಿಸಿದ್ಧೇಶ್ವರ ಹೆಸರಿಡುವುದರಲ್ಲಿ ತಪ್ಪೇನಿಲ್ಲ. ನಮ್ಮವರೇ ಆದ ನೀವು ಪ್ರಯತ್ನ ಮಾಡಬೇಕು ಎಂದು ಸಂಸದರಿಗೆ ಮನವಿ ಮಾಡಿದರು.
ಪ್ರಮುಖ ವೆಂಕಟೇಶ ಶ್ಯಾನಭಾಗ್ ಮಾತನಾಡಿ, ಶ್ರೀ ಗವಿಮಠ ದಾಸೋಹಕ್ಕೆ ಹೆಸರಾಗಿದೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಶ್ರೀ ಗವಿಮಠ ಸಲ್ಲಿಸುತ್ತಿದೆ. ಗವಿಸಿದ್ಧೇಶ್ವರರ ಹೆಸರನ್ನೇ ರೈಲು ನಿಲ್ದಾಣಕ್ಕೆ ಇಡಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಂಸದ ರಾಜಶೇಖರ ಹಿಟ್ನಾಳ, ಶ್ರೀ ಗವಿಮಠ ನಮ್ಮೆಲ್ಲರ ಹೆಮ್ಮೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ತಮ್ಮೆಲ್ಲರ ಮನದಿಂಗಿತ ತಿಳಿಸಿ, ಕೊಪ್ಪಳ ರೈಲು ನಿಲ್ದಾಣಕ್ಕೆ ಗವಿಸಿದ್ಧೇಶ್ವರ ಹೆಸರಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವರ್ತಕರಾದ ಮಲ್ಲಿಕಾರ್ಜುನ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ವೀರೇಶ ಕೊಪ್ಪಳ, ಸಿದ್ಧಣ್ಣ ನಾಲ್ವಾಡ, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ವರಪ್ಪ ಕೊಪ್ಪಳ, ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ರಾಜಶೇಖರ ಆಡೂರ, ದಾನಪ್ಪ ಶೆಟ್ಟರ್, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರ, ಕದಳಿ ಮಹಿಳಾ ವೇದಿಕೆಯ ನಿರ್ಮಲಾ ಬಳ್ಳೊಳ್ಳಿ, ಜ್ಯೋತಿ ಕದ್ರಳ್ಳಿಮಠ, ಅಪರ್ಣ ಬಳ್ಳೊಳ್ಳಿ, ಸುಜಾತಾ ಹಲಗೇರಿ, ಪ್ರತಿಭಾ ಅಗಡಿ, ಸುಧಾ ಶೆಟ್ಟರ್, ಹೇಮಾ ಬೊಮ್ಮನಾಳ, ಶಾರದಾ ಗಣವಾರಿ, ಪರಿಮಳ ಹತ್ತಿ, ಸುಮಾ ಹಿರೇಮಠ, ಸೌಮ್ಯಾ ನಾಲ್ವಾಡ, ಚಂದಾ ಅಗಡಿ, ಅನುಸೂಯಾ ಮಟ್ಟಿ, ವಿಜಯಾ ಕೊರ್ಲಹಳ್ಳಿ ಸೇರಿದಂತೆ ಲಿಂಗಾಯತ ಪ್ರಗತಿಶೀಲ ಟ್ರಸ್ಟ್ ಕೊಪ್ಪಳ, ಕೊಪ್ಪಳ ವರ್ತಕರ ಸಂಘ, ಅಕ್ಕಮಹಾದೇವಿ ಮಹಿಳಾ ಮಂಡಳಿ, ಬಸವ ಸಮಿತಿ ಕೊಪ್ಪಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲೆ, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಕೊಪ್ಪಳ, ಪ್ರಗತಿ ಮಹಿಳಾ ವೇದಿಕೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಯುವ ಘಟಕ ಕೊಪ್ಪಳ, ಜಿಲ್ಲಾ ವಕೀಲರ ಸಂಘ ಕೊಪ್ಪಳ ಸೇರಿದಂತೆ ಹಲವು ಪ್ರಮುಖ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.