ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ತಾಲೂಕಿನ ಬಗರಹುಕುಂ ಸಾಗುವಳಿ ಅಕ್ರಮವನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಉಪ ತಹಸೀಲ್ದಾರ ಶಾಮ ಗೊರವರ ಮೂಲಕ ಶಾಸಕ ಪ್ರಕಾಶ ಕೋಳಿವಾಡರಿಗೆ ಮನವಿ ಸಲ್ಲಿಸಿದರು.ತಾಲೂಕು ಕೃಷಿ ಅವಲಂಬಿತವಾಗಿದ್ದು ತುಂಗಭದ್ರಾ ನದಿ, ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಮತ್ತು ಕುಮದ್ವತಿ ನದಿಗಳು ಹಾಗೂ ಸಾಕಷ್ಟು ಬೋರ್ವೆಲ್ಗಳ ಮುಖಾಂತರ ರೈತರು ಪ್ರತಿನಿತ್ಯ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಕಾಲ ಕಳೆದಂತೆ ಬಿತ್ತುವ ಭೂಮಿ ಕಡಿಮೆ ಆಗುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದರಿಂದ ಭೂಮಿ ಕಡಿಮೆ ಆಗುರುವುದರಿಂದ ಕೆಲವು ರೈತರು ಅರಣ್ಯ ಭೂಮಿಗಳನ್ನು ಅಕ್ರಮವಾಗಿ ಸಾಗುವಳಿ ಮಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದರಿಂದ ಕೆಲವು ರೈತರ ಕೇಸ್ ಹಾಕಿಸಿಕೊಂಡು ಕೋರ್ಟಿಗೆ ಅಲೆದಾಡುತ್ತಿದ್ದಾರೆ. ಆದರೂ ಎದೆಗುಂದದೆ ರೈತರು ಭೂಮಿ ಸಾಗುವಳಿ ಮಾಡಿ ಹಗಲು ರಾತ್ರಿ ಎನ್ನದೆ ದುಡಿಯುತ್ತಾ ಇದ್ದಾರೆ. ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಪ್ರಕರಣ 94 ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಾಲೂಕಿನ ಬಗರಹುಕುಂ ಸಮಿತಿಗೆ ಈಗಾಗಲೇ ರೈತರಿಂದ 740 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ಕೆಲವು ರೈತರು ಅರ್ಜಿ ಸಲ್ಲಿಸದೆ ಇರುವ ಅರ್ಜಿಗಳನ್ನು ತೆಗೆದುಕೊಂಡು ಸೂಕ್ತ ಕಾಲಮಿತಿಯೊಳಗೆ ಅಕ್ರಮ ಭೂಸಾಗುವಳಿಯನ್ನು ಸಕ್ರಮಗೊಳಿಸಿ ಕೂಡಲೇ ಆದೇಶ ಮಾಡಿ ಪಟ್ಟ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ರಮೇಶ ಪೂಜಾರ, ನಾಗರಾಜ ಪೂಜಾರ, ಬಸವರಾಜ ಬೇವಿನಹಳ್ಳಿ, ಪ್ರವೀಣ ಅಸುಂಡಿ, ಶಿವನಗೌಡ ಪಾಟೀಲ, ಜಗದೀಶ ಮಲಬೇರ, ಹೊನ್ನಪ್ಪ ಹಳ್ಳಿ, ಮಾಲತೇಶ ಕುಸಗೂರ, ಬಿ.ಬಿ. ಕೆಳಗಿನಮನಿ, ರಾಮಪ್ಪ ಕುಸಗೂರ, ಹನುಮಂತಪ್ಪ ಹಳ್ಳಿ, ಮಾಂತೇಶ ನಿಂಗಮ್ಮನವರ, ಸಂತೋಷ ಮತ್ತಿತರರಿದ್ದರು.