ಸಾರಾಂಶ
ಪ್ರೊ. ವರದೇಶ್ ಹಿರೇಗಂಗೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಆಂಧ್ರಪ್ರದೇಶದ ಅಪೋಲೋ ವಿವಿ ಕುಲಪತಿ ಡಾ. ಎಚ್. ವಿನೋದ್ ಭಟ್ ಮಾರ್ಗದರ್ಶಕರಾಗಿದ್ದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ವಿಶ್ವಮಾನ್ಯತೆ ಪಡೆದ ಕನ್ನಡದ ಅಗ್ರಗಣ್ಯ ಸಾಹಿತಿ ಪ್ರೊ.ಯು.ಆರ್.ಅನಂತಮೂರ್ತಿ ಅವರ ‘ಶೈಕ್ಷಣಿಕ ತತ್ವಜ್ಞಾನ’ದ ಕುರಿತು ಪ್ರೊ. ವರದೇಶ್ ಹಿರೇಗಂಗೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯೊಂದಿಗೆ ಗೌರವಿಸಿದೆ.ಪ್ರಸ್ತುತ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ ನ (ಜಿಸಿಪಿಎಎಸ್) ಮುಖ್ಯಸ್ಥರಾಗಿರುವ ಪ್ರೊ. ವರದೇಶ್ ಹಿರೇಗಂಗೆ ಅವರಿಗೆ ಈ ಸಂಶೋಧನಾ ಮಹಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಅಪೋಲೋ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಮಾರ್ಗದರ್ಶಕರಾಗಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ.ಅನಂತಮೂರ್ತಿ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿಯೂ ಮತ್ತು ನಾಲ್ಕು ವರ್ಷಗಳ ಕಾಲ ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಸಂಶೋಧನಾ ಪ್ರಬಂಧವು ಪೂರ್ವ ಮತ್ತು ಪಶ್ಚಿಮದ ದೃಷ್ಠಿಕೋನಗಳ ಹಿನ್ನೆಲೆಯೊಂದಿಗೆ ಪ್ರೊ.ಅನಂತಮೂರ್ತಿಯವರ ಆತ್ಮಕಥೆ, ಶಿಕ್ಷಣದ ಕುರಿತು ಅವರ ಮಾತು ಮತ್ತು ಲೇಖನಗಳು, ಘಟಿಕೋತ್ಸವ ಭಾಷಣಗಳು, ತರಗತಿಯಲ್ಲಿನ ಅವರ ಉಪನ್ಯಾಸಗಳು ಮತ್ತು ಸಂದರ್ಶನಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.ಪ್ರೊ. ವರದೇಶ್ ಹಿರೇಗಂಗೆ ಆರಂಭದ ಕೆಲವರ್ಷ ಪತ್ರಕರ್ತರಾಗಿದ್ದು, ನಂತರ ಮಾಹೆಯ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ನಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸಂಶೋಧನೆಯ ಮಾರ್ಗದರ್ಶಿಯಾಗಿದ್ದ ಡಾ. ಎಚ್ ವಿನೋದ್ ಭಟ್ ಈ ಮುಂಚೆ ಮಾಹೆಯ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸಂಶೋಧನೆಯ ಕುರಿತು ಮಾಹೆಯ ಸಹಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಕುಲಪತಿಗಳಾದ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.