ಸಾರಾಂಶ
ಆಂಧ್ರ, ತೆಲಂಗಾಣ, ಪಂಜಾಬ್ನಿಂದ ಅಕ್ಕಿ ತರಿಸುವ ಪ್ಲಾನ್
ಕನ್ನಡಪ್ರಭ ವಾರ್ತೆ ವಿಜಯಪುರ
ಚುನಾವಣೆ ವೇಳೆ ನಾವು ೧೦ ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ, ಅಕ್ಕಿ ಕೊರತೆ ಇರುವುದರಿಂದ ಅಕ್ಕಿ ಬದಲಿಗೆ ಹಣ ನೀಡುತ್ತಿದ್ದೇವೆ. ಆಂಧ್ರ, ತೆಲಂಗಾಣ, ಪಂಜಾಬ್ನಿಂದ ಅಕ್ಕಿ ತರಿಸುವ ಪ್ಲಾನ್ ಮಾಡಿಕೊಂಡಿದ್ದೇವೆ. ಮುಂದೆ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಕೆಲವರು ಹಗಲು ಕನಸು ಕಾಣುತ್ತಾರೆ. ನಾವು ಅದನ್ನು ಡೇ ಡ್ರೀಮ್ ಎನ್ನುತ್ತೇವೆ. ಬಿಜೆಪಿಗರು ಹಗಲು ಕನಸು ಕಂಡರೆ ನಾವು ಬೇಡ ಅನ್ನೋಕೆ ಆಗಲ್ಲ ಎಂದರು.
ಎನ್ಡಿಆರ್ಎಫ್ ನಿಯಮದಂತೆ ₹17 ಸಾವಿರ ಕೋಟಿ ನಷ್ಟದ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಈಗಾಗಲೇ ಕೇಂದ್ರ ತಂಡ ಪರಿಶೀಲನೆ ಮಾಡಿಕೊಂಡು ಹೋಗಿದೆ. ಆದರೆ ಕೇಂದ್ರ ಸರ್ಕಾರ ಈವೆರೆಗೂ ಬಿಡಿಗಾಸನ್ನು ನೀಡಿಲ್ಲ. ಮೊದಲು ಅದನ್ನು ಕೊಡಲು ಹೇಳಿ ಎಂದು ವಿಪಕ್ಷ ನಾಯಕ ಆರ್.ಅಶೋಕ ಅವರಿಗೆ ತಿರುಗೇಟು ನೀಡಿದರು.ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಜನ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮೊದಲು ಇದನ್ನು ಬಗೆಹರಿಸುತ್ತೇವೆ. ಈಗ ಡಿಸಿಎಂ ವಿಚಾರದ ಬಗ್ಗೆ ನಾವು ಯೋಚನೆ ಮಾಡಿಲ್ಲ ಎಂದರು.
ನಾವು ₹17 ಸಾವಿರ ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬರ ನಿರ್ವಹಣೆಯಾಗುತ್ತಿಲ್ಲ ಎನ್ನುವ ಬಿಜೆಪಿಗರು ಎಷ್ಟು ಹಣ ತಂದಿದ್ದಾರೆ ಎಂದು ಕೇಳಿ. ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಏನು? ಮಾಡಿದೆ ಎಂದು ಕೇಳಿ ಎಂದರು.