ತಾಯಿಯ ಹೆಸರಲ್ಲಿ ಗಿಡ ನೆಟ್ಟು ಪೋಷಿಸಿ

| Published : Jul 17 2025, 12:30 AM IST

ಸಾರಾಂಶ

ಗಾಳಿ, ನೀರು, ಭೂಮಿ, ಗಿಡಮರಗಳನ್ನು ಮಾಲಿನ್ಯವಾಗದಂತೆ ಲಕ್ಷ್ಯ ವಹಿಸಬೇಕಾಗಿದೆ.

ಸಿದ್ದಾಪುರ: ಪರಿಸರದ ಎಲ್ಲ ಅಂಶಗಳು ಅತ್ಯಂತ ಮಹತ್ವದ್ದಾಗಿದೆ. ಗಾಳಿ, ನೀರು, ಭೂಮಿ, ಗಿಡಮರಗಳನ್ನು ಮಾಲಿನ್ಯವಾಗದಂತೆ ಲಕ್ಷ್ಯ ವಹಿಸಬೇಕಾಗಿದೆ. ಶುದ್ಧ ಗಾಳಿ, ಶುದ್ಧ ನೀರು ನಮಗೆ ತೀರಾ ಅಗತ್ಯ. ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಎಲ್ಲರ ಗಮನ ತೀರಾ ಅಗತ್ಯ. ನಿಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪವಿತ್ರಾ ಯು.ಜೆ. ಹೇಳಿದರು.

ಲಯನ್ಸ್ ಕ್ಲಬ್ ಹಾಗೂ ತಾಲೂಕಾ ನಿವೃತ್ತ ನೌಕರರ ಸಂಘಗಳ ಸಹಯೋಗದಲ್ಲಿ ಐಟಿಐ ಅವರಗುಪ್ಪ ಆವರಣದಲ್ಲಿ ವನಮಹೋತ್ಸವವನ್ನು ಗಿಡ ನೆಟ್ಟು, ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶುಭ ಕಾರ್ಯದ ಸಂದರ್ಭದಲ್ಲಿ ಗಿಡ ನೆಡಲು ಮುಂದಾಗಬೇಕು. ನಮ್ಮ ಜಗತ್ತಿನ ಪ್ರಾಕೃತಿಕ ಸಂಪತ್ತನ್ನು ಕಾಯ್ದುಕೊಂಡು ಬರಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.

ಅಧ್ಯಕ್ಷತೆಯನ್ನು ಐಟಿಐ ಪ್ರಾಚಾರ್ಯ ವೈ.ಎನ್. ಮಸರಕಲ್ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್ಟ ಕಲ್ಲಾಳ ಅತಿಥಿಯಾಗಿ ಮಾತನಾಡಿ, ಪರಿಸರ ರಕ್ಷಣೆ ಮತ್ತು ಆದ್ಯತಾ ವಿಷಯವಾಗಿರಬೇಕು ಎಂದರು.

ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ ಅತಿಥಿಯಾಗಿ ಮಾತನಾಡಿ, ನೆಟ್ಟ ಗಿಡಗಳನ್ನು ರಕ್ಷಿಸುವುದು ಮಹತ್ವದ ಸಂಗತಿ. ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಗಬೇಕು ಎಂದರು.

ಪಾಲಿಟೆಕ್ನಿಕ್ ಕಾಲೇಜ್ ಪ್ರಾಚಾರ್ಯ ಶಾಂತಾರಾಮ ಹೆಗಡೆ ಮಾತನಾಡಿ, ಪರಿಸರಕ್ಕೆ ಧಕ್ಕೆ ಉಂಟು ಮಾಡುವುದು ಅಪರಾಧವಾಗಿದ್ದು, ಈ ಕುರಿತು ಹೆಚ್ಚು ಪ್ರಜ್ಞೆ ಮೂಡಬೇಕು ಎಂದರು.

ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎ.ಜೆ. ನಾಯ್ಕ ಹಾಗೂ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ಆಕಾಶ ಹೆಗಡೆ ಗುಂಜಗೋಡ, ಐ.ಕೆ. ಪಾಟೀಲ, ವಿ.ಎಸ್. ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಶೇಷಗಿರಿ ಹೆಗಡೆ ಸ್ವಾಗತಿಸಿ ವಂದಿಸಿದರು. ಗಿರೀಶ ಎನ್.ಎಸ್. ನಿರೂಪಿಸಿದರು.

ಸಿದ್ದಾಪುರದ ಅವರಗುಪ್ಪದ ಐಟಿಐನಲ್ಲಿ ವನಮಹೋತ್ಸವ ಜರುಗಿತು.