ತಾಪಮಾನ ಸಮತೋಲನ ಕಾಪಾಡಲು ಗಿಡ ಬೆಳೆಸಿ

| Published : Sep 03 2024, 01:34 AM IST

ಸಾರಾಂಶ

ಈಗ ಗುಜಾರತ್‌ನಲ್ಲಿ ಆಗುತ್ತಿರುವ ಜಳಪ್ರಳಯ, ಆಂಧ್ರ ಪ್ರದೇಶದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಜನರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ, ಹವಾಮಾನ ಸಮತೋಲನ ಕಾಪಾಡಬೇಕಾದರೆ ಪ್ರತಿಯೊಬ್ಬರು ಮನೆಗೊಂದು ವೃಕ್ಷವನ್ನು ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ಜಾಗತಿಕ ತಾಪಮಾನ ಏರಿಕೆ ಆದರೆ ನಮಗೇನು ಹಾನಿ, ಹವಾಮಾನ ವೈಪರೀತ್ಯಾ ಉಂಟಾದರೆ ನಮಗೇನು ನಷ್ಟ, ಈ ರೀತಿಯ ಮನೋಭಾವ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಇದೆ, ಎಲ್ಲರಿಗೂ ಆಗುವ ಪರಿಣಾಮವೇ ನಮಗೂ ಆಗುತ್ತೆ ಬಿಡಿ ಎಂದು ಈ ವಿಚಾರದಲ್ಲಿ ಮೂಗು ಮರಿಯುವಂತಿಲ್ಲ, ಪರಿಸರ ಸಂರಕ್ಷಣೆ ಮಾಡಲು ಎಲ್ಲರೂ ಮುಂದಾಗಬೇಕೆಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.ಮಾರಿಕುಪ್ಪಂನ ಎನ್‌ಬಿಎಂ ಪ್ಲಾಟೇಶನ್‌ನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕೆಜಿಎಫ್ ವಕೀಲರ ಸಂಘ, ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಹವಾಮಾನ ವೈಪರೀತ್ಯದ ದುಷ್ಪರಿಣಾಮ

ಈಗ ಗುಜಾರತ್‌ನಲ್ಲಿ ಆಗುತ್ತಿರುವ ಜಳಪ್ರಳಯ, ಆಂಧ್ರ ಪ್ರದೇಶದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಜನರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ, ಹವಾಮಾನ ಸಮತೋಲನ ಕಾಪಾಡಬೇಕಾದರೆ ಪ್ರತಿಯೊಬ್ಬರು ಮನೆಗೊಂದು ವೃಕ್ಷವನ್ನು ಬೆಳೆಸಬೇಕೆಂದು ತಿಳಿಸಿದರು.ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮುಜಫರ್ ಎ.ಮಾಂಜರಿ ಮಾತನಾಡಿ, ಪರಿಸರ ರಕ್ಷಿಸಲು ಪ್ರತಿಯೊಬ್ಬರು ತಾಯಿಯ ಹೆಸರಿನಲ್ಲಿ ಒಂದು ವೃಕ್ಷವನ್ನು ಬೆಳೆಸುವ ಮೂಲಕ ಪರಿಸರಕ್ಕೆ ಅಪಾರ ಕೊಡುಗೆ ನೀಡುವ ಅಗತ್ಯವಿದೆ ಎಂದರು.ಮನುಷ್ಯನ ದುರಾಸೆಗೆ ಪರಿಸರ ಬಲಿ

ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ನಮ್ಮ ಅಗತ್ಯಗಳಿಗಾಗಿ ಮತ್ತು ದುರಾಸೆಗಾಗಿ ನಾವು ಮಾನವರು ಪ್ರಕೃತಿಯನ್ನು ಕೊಲ್ಲುತ್ತಿದ್ದೇವೆ, ಹವಾಮಾನ ಬದಲಾವಣೆಯ ಮಾನವರು ವಾಸ್ತವಾಗಿ ಎದುರಿಸುತ್ತಿರುವ ಸಮಸ್ಯೆಯಾಗಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್.ಎಂ., ೧ ನೇ ಅಪರ ಸಿವಿಲ್ ನ್ಯಾಯಾಧೀಶರಾದ ಶಮಿದ.ಕೆ, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಅರಣ್ಯ ಇಲಾಖೆ ಫಾರೆಸ್ಟ್ ಆಫೀಸರ್ ಆರ್.ವೇಣು ಇದ್ದರು.