ಮೋದೀದು ಉದ್ರಿ ಗ್ಯಾರಂಟಿ, ನಮ್ದು ನಗದಿ ಗ್ಯಾರಂಟಿ

| Published : Apr 25 2024, 01:00 AM IST

ಸಾರಾಂಶ

ಜಾಧವ ಅವರು ಕಳೆದ ಬಾರಿಯಂತೆ ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ನಾಚಿಕೆ ಆಗಬೇಕು ಬಿಜೆಪಿಗರಿಗೆ. ಈಗ ನಿರ್ಧಾರ ಮಾಡಬೇಕಾದವರು ಕಲಬುರಗಿಯ ಮತದಾರರು.

ಕನ್ನಡಪ್ರಭ ವಾರ್ತೆ ಅಫಜಲ್ಪುರ/ಚವಡಾಪುರ

ಮೋದಿ ಮತ್ತು ಬಿಜೆಪಿದು ಉದ್ರಿ ಗ್ಯಾರಂಟಿ, ನಮ್ಮದು ನಗದಿ ಗ್ಯಾರಂಟಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಗೇಲಿ ಮಾಡಿದರು.

ಅಫಜಲ್ಪುರದಲ್ಲಿನ ಕಾಂಗ್ರೆಸ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿಸಿ ಅದ್ಯಕ್ಷ ಖರ್ಗೆಯವರು ಆಗಮಿಸುವ ಮುಂಚೆಯೇ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ಹೆಸರಲ್ಲಿ ಮಂಕುಬೂದಿ ಎರಚೋ ಕೆಲಸವಾಗುತ್ತಿದ್ದು ಯಾರೂ ನಂಬಬಾರದು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಬೆಲೆ ಏರಿಕೆ ಆಗಿದೆ ಎಂದು ಬಿಜೆಪಿಗರು ಬೀದಿಗಿಳಿದು ಹೋರಾಟ ಮಾಡಿದ್ದರು. ಇಂದು ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಆದರೂ ಎಲ್ಲರೂ ಬಾಯಿ ಮುಚ್ಚಿ ಕುಳಿತಿದ್ದಾರೆ. ದೇಶದ ಸಾಲ ಮೀತಿ ಮೀರಿ ಬೆಳೆದಿದೆ ಎಂದು ಕಳವಳ ಹೊರಹಾಕಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ರೈತರು, ಬಡವರು, ಕಾರ್ಮಿಕರಿಗೆ ಲಾಭ ಆಗಲಿದೆ. ವಿಧಾನ ಸಭೆ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದೇವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತೈದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆಂದರು.

ಜಾಧವ್‌ ಕೊಡುಗೆ ಶೂನ್ಯ: ಜಾಧವ ಅವರು ಕಳೆದ ಬಾರಿಯಂತೆ ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ನಾಚಿಕೆ ಆಗಬೇಕು ಬಿಜೆಪಿಗರಿಗೆ. ಈಗ ನಿರ್ಧಾರ ಮಾಡಬೇಕಾದವರು ಕಲಬುರಗಿಯ ಮತದಾರರಿಗೆ. ಮೋದಿ ಹೆಸರಲ್ಲಿ ಮಂಗ ಮಾಡುವವರಿಗೆ ಮತ ಹಾಕುತ್ತೀರೋ? ಅಥವಾ ಕಲಬುರಗಿ ಅಭಿವೃದ್ಧಿ ಮಾಡಿದ ಖರ್ಗೆ ಸಾಹೇಬರ ಕೈ ಬಲ ಪಡಿಸಲು ಕಾಂಗ್ರೆಸ್ ಗೆ ಮತ ಹಾಕುವಿರೋ ನಿರ್ಧಾರ ನಿಮಗೆ ಬಿಟ್ಟಿದ್ದು ಎಂದರು.

ಚಪ್ಪರ ಕಂಡಲ್ಲಿ ಕೊಳ್ಳಿ ಇಡೋ ಬಿಜೆಪಿ: ಬಿಜೆಪಿ ಚಪ್ಪರ ಕಂಡ್ರ ಕೊಳ್ಳಿ ಇಡೋದು, ಅಣ್ತಮ್ಮರನ್ನ ಒಡೆಯೋ ಪಕ್ಷ ಎಂದು ಮಾಜಿ ಸಚಿವ, ಬಂಜಾರಾ ಸಮಾಜ ಮುಖಂಡ ರೇವು ನಾಯಕ ಬೆಳಮಗಿ ಕಿಡಿ ಕಾರಿದರು.

ಮೋದಿ ಗ್ಯಾರಂಟಿ ಕನ್ನಡಿಯೊಳಗಿನ ಗಂಟು, ಕಾಂಗ್ರೆಸ್ ಗ್ಯಾರಂಟಿ ತಾಯಿ ಉಡಿ ತಣ್ಣಗಾಗಿಸುವ ಗ್ಯಾರಂಟಿ ಆಗಿವೆ. ಜಿಲ್ಲೆಯ ಬಂಜಾರ ಸಮಾಜಕ್ಕೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಸುಳ್ಳು ಹೇಳಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಬಂಜಾರಾ ಸಮಾಜ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲಲಿದೆ ಎಂದರು.

ಲಿಂಗಾತಿಯಿತರು ಬಿಜೆಪಿ ಸ್ವತ್ತೆ?: ಕಲಬುರಗಿ ಶಾಸಕ ಡಾ. ಅಲ್ಲಮಪ್ರಭು ಪಾಟೀಲ ಮಾತನಾಡಿ, ಬಿಟ್ಟಿ ಭಾಗ್ಯ ಎನ್ನುವ ಬಿಜೆಪಿಗರಿಗೆ ನಾಚಿಕೆ ಆಗಬೇಕು. ಎಲ್ಲಾ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆನ್ನುವ ಬಿಜೆಪಿಗರ ಬಳಿ ಲಿಂಗಾಯತರು ಒತ್ತೆ ಬಿದ್ದಿಲ್ಲ. ಬಸವ ಜಯಂತಿ ಆಚರಣೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡುವ ವ್ಯವಸ್ಥೆ ಮಾಡಿದ್ದಲ್ಲದೆ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ ಲಿಂಗಾಯತರು ಸರ್ವಜನರ ಹಿತ ಕಾಯುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಜನಪರ ಸರ್ಕಾರ ರಚನೆ ಮಾಡುವಲ್ಲಿ ಕಾರಣೀಕರ್ತರಾಗಿರೆಂದರು.

ಬಿಜೆಪಿಗರು 371 ಜೆ ತೆಗೆದರೂ ಅಚ್ಚರಿ ಇಲ್ಲ: ಬಿಜೆಪಿಗರ ಹಿಂದುತ್ವ ಯಾರೂ ನಂಬಬೇಡಿ. 700 ವರ್ಷ ಮುಸಲ್ಮಾನರ ಆಳ್ವಿಕೆ ಆದಾಗಲೂ ದೇಶದಲ್ಲಿ ಇಸ್ಲಾಂ ಹರಡಿಲ್ಲ. ಅಂದಿನಿಂದ ಇಂದಿನ ತನಕ ನಾವು ಬಹುಸಂಖ್ಯಾತರಾಗಿದ್ದೇವೆ. ಹೀಗಾಗಿ ಬಿಜೆಪಿಗರು ಹೇಳುವ ಸುಳ್ಳಿನ ಹಿಂದುತ್ವದ ವಿಷಜಾಲಕ್ಕೆ ಯಾರು ಬಲಿಯಾಗಬಾರದು. ಬಿಜೆಪಿ ಮುಂದೆ 371 (ಜೆ) ಕಿತ್ತೊಗೆದರೂ ಅಚ್ಚರಿ ಪಡಬೇಕಿಲ್ಲ. ಈಗಲೇ ಜಾಗೃತರಾಗಿರಿ ಎಂದು ಶಾಸಕಿ ಖನೀಜ್‌ ಫಾತೀಮಾ ಕರೆ ನೀಡಿದರು.

ನಮ್ಮ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರು ಸರಳರಲ್ಲೇ ಅತೀ ಸರಳರಾಗಿದ್ದಾರೆ. ಅವರನ್ನು ಲೋಕಸಭೆಗೆ ಕಳಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ.ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲ ಪಡಿಸೋಣವೆಂದು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಕರೆ ನೀಡಿದರು.

ಖರ್ಗೆ ಋಣ ತೀರಿಸಿ ಸಾಯುವೆ: ಎಂವೈಪಿ ಭಾವುಕ

ಶಾಸಕ ಎಂವೈ ಪಾಟೀಲ್‌ ಮಾತನಾಡಿ, ಮಾಲೀಕಯ್ಯ ಗುತ್ತೇದಾರ ಯಾವುದೋ ಕಾರಣಕ್ಕೆ ಪಕ್ಷದಿಂದ ಹೊರಹೋಗಿದ್ದರು. ಈಗ ಅವರು ಪಕ್ಷಕ್ಕೆ ಬಂದಿದ್ದು ನಮಗೆ ಆನೆ ಬಲ ಬಂದಂತಾಗಿದೆ. 2019ರ ಚುನಾವಣೆಯಲ್ಲಿ ಅಫಜಲ್ಪುರ ಮತಕ್ಷೇತ್ರದ ಜನ ನನ್ನ ಮಾತಿಗೆ ಮನ್ನಣೆ ನೀಡಲಿಲ್ಲ. ದೇಶದ ದೊಡ್ಡ ನಾಯಕ, ಸೋಲಿಲ್ಲದ ಸರದಾರ ಆಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು ಎಂದು ಮೆಲಕು ಹಾಕಿದರು.

ಅದರಲ್ಲೂ ಅಫಜಲ್ಪುರ ಮತಕ್ಷೇತ್ರದ ಮತದಾರರು ಅತೀ ಹೆಚ್ಚು ಲೀಡ್ ಬಿಜೆಪಿಗೆ ನೀಡುವ ಮೂಲಕ ನಾನು ಕ್ಷೇತ್ರದಲ್ಲಿ ತಲೆ ಎತ್ತಿ ತಿರುಗದಂತೆ ಮಾಡಿದರು. ನಾನು ಯಾವ ಪಕ್ಷದಲ್ಲೂ ಇಲ್ಲದೇ ಬೀದಿಗೆ ಬಂದಾಗ ನನ್ನ ಕೈ ಹಿಡಿದು ಮೇಲೆತ್ತಿದವರು ಮಲ್ಲಿಕಾರ್ಜುನ ಖರ್ಗೆ ಅವರು. ಆದರೆ, ಅವರನ್ನು ಸೋಲಿಸಲು ಅಫಜಲ್ಪುರ ಮತಕ್ಷೇತ್ರದಿಂದ ಹೆಚ್ಚು ವಿರುದ್ಧ ಮತಗಳು ಬಂದಿದ್ದು ನನ್ನ ಬದುಕಿನಲ್ಲಿ ದೊಡ್ಡ ನೋವಿನ ಸಂಗತಿ. ಇದು ನನ್ನ ಕೊನೆಯ ರಾಜಕೀಯ ಚುನಾವಣೆ ಹೀಗಾಗಿ ಜನರ ಋಣ ಮತ್ತು ನನ್ನನ್ನು ಬೆಳೆಸಿದ ಖರ್ಗೆ ಅವರ ಋಣ ತೀರಿಸಿ ಸಾಯಬೇಕೆಂದಿದ್ದೇನೆ. ಅವರ ಋಣ ತೀರಿಸಲು ಇದೊಂದು ಸುವರ್ಣಾವಕಾಶ ಬಂದಿದೆ. ಅವರ ಕೈ ಬಲಪಡಿಸುವ ಕೆಲಸ ನಾವು ಮಾಡದಿದ್ದರೆ ದೇವರು ನಮಗೆ ಮೆಚ್ಚುವುದಿಲ್ಲವೆಂದರು.

ದೇರ್‌ ಹುವಾ- ದುರಸ್ತ ಹುವಾ: ಮಾಲೀಕಯ್ಯ

ಇತ್ತೀಚೆಗೆ ಬಿಜೆಪಿ ತೊರೆದು ಕೈಹಿಡಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ನನ್ನ ಹಾಗೂ ಶಾಸಕ ಎಂ.ವೈ ಪಾಟೀಲ್ ಬೆಂಬಲಿಗರ ಸಮ್ಮಿಲನವೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇತಿಹಾಸ ಬರೆಯಲಿದೆ. ರಾಧಾಕೃಷ್ಣ ದೊಡ್ಮನಿ ಅವರ ಗೆಲುವಿಗೆ ಮುನ್ನುಡಿ ಆಗಲಿದೆ. 40 ಸಾವಿರ ಮತಗಳ ಲೀಡ್‌ ಕಾಂಗ್ರೆಸ್ ಪಕ್ಷಕ್ಕೆ ಅಫಜಲ್ಪುರ ಮತಕ್ಷೇತ್ರದಿಂದ ನೀಡಲಿದ್ದೇವೆ. ದೇರ ಹುವಾ ಲೇಕಿನ್ ದುರಸ್ತ ಹುವಾ, ಕೆಟ್ಟ ಘಳಿಗೆಯಲ್ಲಿ ಪಕ್ಷ ಬಿಟ್ಟಿದ್ದೆ, ಈಗ ಪುನಃ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆಂದರು.

ಮುಸಲ್ಮಾನ ಸಮುದಾಯದ ಬಗ್ಗೆ ಮೋದಿ ಹೇಳಿಕೆ ನಾಚಿಕೆಗೇಡಿನದ್ದು ಎಂದರಲ್ಲದೆ ಎಂ.ವೈ ಪಾಟೀಲರು ಕೊನೆಯ ಚುನಾವಣೆ ಎಂದಿದ್ದಾರೆ. ನಾನು ಹಾಗೆ ಹೇಳಲ್ಲ. ನನ್ನ ಕುಟುಂಬ ಒಡೆದ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ತನಕ ನಾನು ಚುನಾವಣಾ ರಾಜಕೀಯದಲ್ಲಿ ಇರುತ್ತೇನೆಂದರು.

ಮಾಜಿ ಸಚಿವ ಬಾಬೂರಾವ ಚಿಂಚನಸೂರ್‌, ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಮಾತನಾಡಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.