ಸಾರಾಂಶ
ಹುಬ್ಬಳ್ಳಿ: ದೇಶಾದ್ಯಂತ ಅತ್ಯಂತ ವಿಶ್ವಾಸರ್ಹತೆ, ಪ್ರಸಿದ್ಧಿ ಪಡೆದಿರುವ ಪಿಎನ್ಜಿ (ಪುರುಷೋತ್ತಮ ನಾರಾಯಣ ಗಾಡ್ಗೀಳ್) ಗ್ರುಪ್ನ ನೂತನ ಶಾಖೆ ಆರಂಭವಾಗಿರುವುದು ಹೆಮ್ಮೆಯ ಸಂಗತಿ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ದಾಜಿಬಾನ್ಪೇಟೆಯಲ್ಲಿ ಗುರುವಾರ ಆರಂಭಗೊಂಡ ಪಿಎನ್ಜಿ ಪುರುಷೋತ್ತಮ ನಾರಾಯಣ ಗಾಡ್ಗೀಳ್ ಸರಾಫ್ ಮತ್ತು ಜ್ಯುವೆಲ್ಲರ್ಸ್ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿದರು.ಚಿನ್ನ, ಬೆಳ್ಳಿ, ವಜ್ರಗಳ ಆಭರಣಗಳ ವ್ಯಾಪಾರದ ಜತೆ ಜತೆಗೆ ಪಿಎನ್ಜಿ ಪರಿವಾರದವರು ಒಳ್ಳೆಯ ಸಂಸ್ಕೃತಿ, ಧಾರ್ಮಿಕ ಶ್ರದ್ಧೆ, ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದೆ. ಇದರ ಪರಿಣಾಮದಿಂದ 192 ವರ್ಷದಿಂದ ಈ ಉದ್ಯಮದಲ್ಲಿ ಪಿಎನ್ಜಿ ಪರಿವಾರ ಜಯ ಸಾಧಿಸುತ್ತಾ ಸಾಗಿದೆ ಎಂದರು.
ಸದ್ಯ ಪಿಎನ್ಜಿ ಪರಿವಾರದ 7ನೇ ತಲೆಮಾರು ಈ ಉದ್ಯಮವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಅವರಲ್ಲಿನ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಬದ್ಧತೆ ಕಾರಣವಾಗಿದೆ. ಪಿಎನ್ಜಿ ಪರಿವಾರದೊಂದಿಗೆ ಚಿನ್ನದ ವ್ಯಾಪಾರ ವಹಿವಾಟನ್ನು ಗ್ರಾಹಕರು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಗ್ರಾಹಕರ ವಿಶ್ವಾಸರ್ಹತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಪಿಎನ್ಜಿ ಪರಿವಾರ ಮತ್ತಷ್ಟು ಎತ್ತರಕ್ಕೆ ಬೆಳಯಲಿ ಎಂದು ಹಾರೈಸಿದರು.ಚಿತ್ರನಟಿ ಆಶಿಕಾ ರಂಗನಾಥ ಮಾತನಾಡಿ, ಶತಮಾನದ ಇತಿಹಾಸ ಹೊಂದಿರುವ ಪಿಎನ್ಜಿ ಬ್ರ್ಯಾಂಡ್ನ್ನು 7 ತಲೆಮಾರಿನಿಂದ ಮುಂದುವರಿಸಿಕೊಂಡು ಹೊರಟಿರುವುದು ಉದ್ಯಮ ಯಶಸ್ಸಿನ ಕೈಗನ್ನಡಿ. ಇಂತಹ ಐತಿಹಾಸಿಕ ಪರಂಪರೆ ಪಿಎನ್ಜಿ ಪರಿವಾರದೊಂದಿಗೆ ಅಸೋಸಿಯೇಟ್ ಆಗಿರುವುದು ನನಗೂ ಹೆಮ್ಮೆಯ ಸಂಗತಿ. ಇದೀಗ ಹುಬ್ಬಳ್ಳಿಯಲ್ಲಿ ತೆರೆದಿರುವ ಶಾಖೆ ಯಶಸ್ಸು ಸಾಧಿಸಲಿದೆಯಲ್ಲದೇ, ಹು-ಧಾ ಸೇರಿದಂತೆ ಈ ಭಾಗದ ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಾಗಿ ಹೊರಹೊಮ್ಮುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಮತ್ತಷ್ಟು ಶಾಖೆಗಳು ತೆರೆಯುವಂತಾಗಲಿ ಎಂದು ಹಾರೈಸಿದರು.
ವಿಶೇಷವಾಗಿ ಹುಬ್ಬಳ್ಳಿಗೆ ಬರುವುದು ಮತ್ತು ಇಲ್ಲಿನ ಜನರನ್ನು ನೋಡುವುದು ನಮಗೆಲ್ಲ ಖುಷಿ ಸಂಗತಿ. ನನ್ನ ಪ್ರತಿ ಸಿನೆಮಾಕ್ಕೂ ಈ ಭಾಗದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನಟಿ ಆಶಿಕಾ ರಂಗನಾಥ, ಹಿಂದಾಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂ. ವೆಂಕಟೇಶಕುಮಾರ, ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾದ ವೈಷ್ಣವಿ ಹಾನಗಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಎನ್ಜಿ ಮಾಲೀಕ ಗಣೇಶ ಗಾಡ್ಗೀಳ್, ಪಿಎನ್ಜಿ ನಿರ್ದೇಶಕ ಹಾಗೂ ಮಹಾರಾಷ್ಟ್ರದ ಶಾಸಕ ಸುಧೀರ ಗಾಡ್ಗೀಳ್, ಪಿಎನ್ಜಿ ಪರಿವಾರದ ಗೌರಿ ಗಾಡ್ಗೀಳ, ತೇಜಸ್ ಗಾಡ್ಗೀಳ, ರಾಜೀವ್ ಗಾಡ್ಗೀಳ್, ಸಮೀರ್ ಗಾಡ್ಗೀಳ್, ಸಿದ್ಧಾರ್ಥ ಗಾಡ್ಗೀಳ್, ಅಪರ್ಣಾ ಸೇರಿದಂತೆ ಇತರರು ಇದ್ದರು.ಕರ್ನಾಟಕದಾದ್ಯಂತ ವಿಸ್ತರಿಸುವ ಗುರಿ: ಹುಬ್ಬಳ್ಳಿಯಲ್ಲಿ ಉದ್ಘಾಟನೆಯಾದ ಪಿಎನ್ಜಿ ನೂತನ ಶಾಖೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕ್ಷಣವಾಗಿದೆ. 1832ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಥಾಪನೆಯಾದ ಪಿಎನ್ಜಿ ಚಿನ್ನದಂಗಡಿ ವ್ಯಾಪಾರ, ಇದೀಗ ದೇಶದಾದ್ಯಂತ ವಿಸ್ತಾರಗೊಂಡಿದೆ. ಮಹಾರಾಷ್ಟ್ರದಲ್ಲಿ 9 ಶಾಖೆಗಳಿದ್ದರೆ, ಕರ್ನಾಟಕದ ವಿಜಯಪುರ, ಬೆಳಗಾವಿ, ಜಮಖಂಡಿಯಲ್ಲಿ ಈಗಾಗಲೇ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಹುಬ್ಬಳ್ಳಿಯಲ್ಲಿ ನೂತನ ಶಾಖೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಪ್ರಾಮಾಣಿಕ, ಪಾರದರ್ಶಕವಾದ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪಿಎನ್ಜಿ ಪರಿವಾರದ ಮಿಲಿಂದ ಹೇಳಿದರು.