ಕವಿತೆಗಳು ನಮ್ಮ ಅಭಿವ್ಯಕ್ತಿಯನ್ನು ಸಾತ್ವಿಕ ರೂಪದಲ್ಲಿ ನೀಡುವ ಅಪೂರ್ವ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಯುಗಾದಿ ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಅಂಕೋಲಾಕವಿತೆಗಳು ನಮ್ಮ ಅಭಿವ್ಯಕ್ತಿಯನ್ನು ಸಾತ್ವಿಕ ರೂಪದಲ್ಲಿ ನೀಡುವ ಅಪೂರ್ವ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾಹಿತಿ, ಕವಿ ಜೆ. ಪ್ರೇಮಾನಂದ ಹೇಳಿದರು.
ಮಂಗಳವಾರ ಜಿ.ಸಿ. ಕಾಲೇಜು ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಅಂಕೋಲಾ ಘಟಕ, ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿ.ಸಿ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಯುಗಾದಿ ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ನೆಲಮೂಲದ ಸಾಹಿತ್ಯಕ್ಕೆ ಹೆಚ್ಚಿನ ಆಯಸ್ಸು. ಅದು ನಮ್ಮ ಅನುಭವದಿಂದ ಬರುವಂತದ್ದು. ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಕವಿ, ಸಾಹಿತಿಗಳ ರಚನೆಯನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಮೂಲಕ ಸ್ವಂತ ರಚನೆಗೆ ತೊಡಗಿಕೊಳ್ಳಬೇಕು. ಕಸಾಪ ಇಂತಹ ಅವಕಾಶವನ್ನು ಒದಗಿಸುತ್ತಲೇ ಬರುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಇರುವ ಸಾಹಿತ್ಯಾಸಕ್ತಿ ಮತ್ತು ಸಾಹಿತ್ಯ ರಚನೆಯ ಸಾಮರ್ಥ್ಯಕ್ಕೆ ವೇದಿಕೆ ಒದಗಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಮುಖ್ಯ ಅತಿಥಿಯಾಗಿ ವಿಶ್ರಾಂತ ಪ್ರಾಧ್ಯಾಪಕ ಜಿ.ಬಿ. ನಾಯಕ, ಬಹುಮಾನ ವಿತರಕರಾಗಿದ್ದ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ಮಾತನಾಡಿದರು.ಕೀರ್ತಿ -ಸ್ನೇಹಾ ಪ್ರಾರ್ಥಿಸಿದರು. ಕಸಾಪ ಕಾರ್ಯದರ್ಶಿ ಜಿ.ಆರ್. ತಾಂಡೇಲ್ ಸ್ವಾಗತಿಸಿದರು. ಪರ್ತಕರ್ತ ವಿಠ್ಠಲದಾಸ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಮಹಾಂತೇಶ ರೇವಡಿ ಕವಿಗೋಷ್ಠಿ ನಡೆಸಿಕೊಟ್ಟರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಭಾಸ ಕಾರೇಬೈಲ್ ನಿರ್ವಹಿಸಿದರು. ಉಪನ್ಯಾಸಕಿ ಸುಲಕ್ಷಾ ನಾಯ್ಕ ವಂದಿಸಿದರು.
ಪತ್ರಕರ್ತರಾದ ಕೆ.ರಮೇಶ, ನಾಗರಾಜ ಮಂಜುಗುಣಿ, ಅರುಣ ಶೆಟ್ಟಿ, ಮೋಹನ ದುರ್ಗೇಕರ್, ದಿನಕರ ನಾಯ್ಕ, ನಿತೇಶ ಕೇಣಿ, ಪ್ರಾಚಾರ್ಯ ಫಾಲ್ಗುಣ ಗೌಡ, ಉಪನ್ಯಾಸಕರಾದ ಡಾ. ಪುಷ್ಪಾ ನಾಯ್ಕ, ಆರ್.ಪಿ. ಭಟ್, ಡಾ. ಆರ್. ಅಶ್ವಿನ್, ಕಸಾಪದ ಗಣಪತಿ ಗಾಂವಕರ್, ಮಹಾದೇವ ಆಗೇರ ಉಪಸ್ಥಿತರಿದ್ದರು.ಕವಿಗೋಷ್ಠಿಯಲ್ಲಿ 11 ಯುವ ಕವಿಗಳು ಪಾಲ್ಗೊಂಡಿದ್ದರು.