ಸಾರಾಂಶ
ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರಾದ ಹರ್ಷವರ್ದನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಸಹಾಯಕ ಆಯುಕ್ತ ಹರ್ಷವರ್ದನ್ ಸ್ವತಃ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಮುಡಿಪು ಸಮೀಪದ ಸಂಬಾರತೋಟ ಪ್ರದೇಶದಲ್ಲಿ ಬಾವಿಗಳಲ್ಲಿ, ಕೊಳವೆಬಾವಿಗಳಲ್ಲಿ ತೈಲಾಂಶ ಮಿಶ್ರಿತ ನೀರು ಪತ್ತೆಯಾಗಿ ಸಮಸ್ಯೆ ಎದುರಾಗಿದ್ದ ಬಗ್ಗೆ ಮಾಧ್ಯಮದ ವರದಿಯ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರಾದ ಹರ್ಷವರ್ದನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಸಹಾಯಕ ಆಯುಕ್ತ ಹರ್ಷವರ್ದನ್ ಸ್ವತಃ ಪರಿಶೀಲಿಸಿದರು.ಬಳಿಕ ಮಾತನಾಡಿದ ಅವರು, ಈಗಾಗಲೇ ಬಾವಿಯ ನೀರನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು ಕೆಲವೇ ದಿನಗಳಲ್ಲಿ ವರದಿ ಬರಲಿದೆ. ವರದಿಯನ್ನು ಪರಿಶೀಲಿಸಿ ಅದರ ಸಾಧ್ಯತೆ ಬಾಧ್ಯತೆಗಳನ್ನು ನೋಡಿಕೊಂಡು ಜಿಲ್ಲಾಡಳಿತ ನೇತೃತ್ವದಲ್ಲಿ ಸಭೆ ನಡೆಸಿ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸ್ಥಳೀಯರಿಗೆ ನೀರಿನ ತೊಂದರೆಯಾಗದಂತೆ ಪಂಚಾಯಿತಿ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.ಬಳಿಕ ಸಮೀಪದ ಪೆಟ್ರೋಲ್ ಪಂಪ್ಗೂ ಭೇಟಿ ನೀಡಿದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿ ಬಸ್ ಹಾಗೂ ಇತರ ವಾಹನಗಳನ್ನು ತೊಳೆಯದಂತೆ ಆದೇಶಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪುಟ್ಟರಾಜು, ಹಿರಿಯ ಜಿಯಾಲಾಜಿಸ್ಟ್ ಶೇಖ್ ದಾವೂದ್, ಕಂದಾಯ ನಿರೀಕ್ಷಕರಾದ ಕೆ. ಪ್ರಮೋದ್ ಕುಮಾರ್, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ತೌಫಿಕ್ ಹಾಗೂ ಪಂಚಾಯತಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.