ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಗ್ರಾಮಾಂತರ ರಾಣೆ ಪೊಲೀಸರು ವರುಣ್ ಹಾಗೂ ಗೋಪಿ ಎಂಬ ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಒಂಬತ್ತು ಗ್ರಾಮ್ ಚಿನ್ನ, ಒಂದು ಗ್ಯಾಸ್ ಸಿಲಿಂಡರ್, ಒಂದು ಗ್ಯಾಸ್ ಸ್ಟವ್, ಎಲ್‌ಜಿ ಟಿವಿ ಹಾಗೂ ಎರಡು ಹಂಡೆಗಳನ್ನು ವಶಕ್ಕೆ ಪಡೆದು ೩ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಸಮೀಪದ ಅಂಚಿಹಳ್ಳಿ ಗ್ರಾಮದ ವರುಣ್ ಹಾಗೂ ಗೋಪಿಯು ತಾಲೂಕಿನ ಪಡುವಲಹಿಪ್ಪೆ, ನಾಗಲಾಪುರ ಹಾಗೂ ಮಾಚಗೋಡನಹಳ್ಳಿ ಗ್ರಾಮದ ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಮನೆಗಳ್ಳತನ ಪ್ರಕರಣಗಳ ತನಿಖೆ ಪ್ರಾರಂಭಿಸಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಸೈ ಸ್ವಾಮಿ ಹಾಗೂ ರಮೇಶ್ ಕುಮಾರ್‌ ಅವರು ಪೊಲೀಸರಾದ ಸುನೀಲ್, ಜಗದೀಶ್, ಲೋಕೇಶ್, ಗವಿರಂಗಪ್ಪ, ರಘು, ಮಹೇಶ್, ಮಂಜುನಾಥ್ ಹಾಗೂ ಪಾಲಾಕ್ಷ ಒಳಗೊಂಡ ಪ್ರತ್ಯೇಕ ತಂಡ ರಚಿಸಿ, ತನಿಖೆ ಕೈಗೊಂಡು, ವರುಣ್ ಹಾಗೂ ಗೋಪಿ ಎಂಬ ಆರೋಪಿಗಳನ್ನು ಬಂಧಿಸಿ, ಕದ್ದಿದ್ದ ಕೆಲವು ಪದಾರ್ಥಗಳನ್ನು ವಶಕ್ಕೆ ಪಡೆದು ೩ ಪ್ರಕರಣಗಳನ್ನು ಬೇಧಿಸಿದ್ದಾರೆ.