ಧಾರವಾಡ:
ಪೊಲೀಸ್ ಇಲಾಖೆ ತ್ಯಾಗ, ಶಿಸ್ತು, ಸಮಯಪ್ರಜ್ಞೆಗೆ ಸಾಕ್ಷಿಯಾಗಿದ್ದು, ಇವುಗಳು ಇಲಾಖೆಯ ಗೌರವ ಹೆಚ್ಚಿಸುತ್ತವೆ. ಇಲಾಖೆಗೆ ಸೇರುವಾಗ ಕೇಳಿದ ಪಾಠ, ಇಲಾಖೆಯ ನೀತಿ-ನಿಯಮಗಳನ್ನು ನಿವೃತ್ತಿಯ ವರೆಗೂ ಸ್ಮರಿಸಿ ಅಳವಡಿಸಿಕೊಂಡು ಮುನ್ನಡೆದರೆ, ಸಾರ್ಥಕ ಸೇವೆ ನಮ್ಮದಾಗುತ್ತದೆ ಎಂದು ನಿವೃತ್ತ ಪೊಲೀಸ್ ಉಪನಿರೀಕ್ಷಕರಾದ ಡಿ. ಚಾಮುಂಡೇಶ್ವರಿ ಹೇಳಿದರು.ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ, ನಿವೃತ್ತರ ಸೇವಾ ಸ್ಮರಣೆ ಹಾಗೂ ಗೌರವ ಸಮರ್ಪಣೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಆಧುನಿಕತೆ ಬಂದಿದೆ. ಅಪರಾಧ ಪತ್ತೆ, ಇಲಾಖೆಯಲ್ಲಿ ಚೈತನ್ಯ, ವೃತ್ತಿ ಕೌಶಲ್ಯ ತುಂಬಲು ವಿಜ್ಞಾನ-ತಂತ್ರಜ್ಞಾನ ಬಳಸಲಾಗುತ್ತಿದೆ. ಎಲ್ಲರೂ ಹೊಸತನ್ನು ಅಳವಡಿಸಿಕೊಂಡು ಸುಗಮವಾಗಿ ಮತ್ತು ಅಕ್ಕರೆಯಿಂದ ಕೆಲಸ ನಿರ್ವಹಿಸುವ ವಾತಾವರಣ ಎಲ್ಲ ಪೊಲೀಸ್ ಕಚೇರಿ ಮತ್ತು ಠಾಣೆಗಳಲ್ಲಿ ಮೂಡಬೇಕೆಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪೊಲೀಸ್ ಕಲ್ಯಾಣ ಚಟುವಟಿಕೆಗಳ ಕುರಿತು ವರದಿ ವಾಚಿಸಿದರು. ವೈ.ಎಂ. ದೊಡ್ಡಮನಿ ಹಾಗೂ ಪಿ.ಎಚ್. ದಾವಣಗೇರಿ ನಿರೂಪಿಸಿದರು. ಡಿ.ಎಸ್. ಧನಗರ ವಂದಿಸಿದರು.ಗೌರವ ಸಮರ್ಪಣೆ:
ಪೊಲೀಸ್ ಇಲಾಖೆಯಲ್ಲಿ ದೀಘಾವಧಿಗೆ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಚ್. ಮುಂದಿನಮನಿ, ಆರ್.ಬಿ. ಹಳ್ಳಿ, ಕೆ.ವಿ. ವಾಲಿಕಾರ, ಎಸ್.ಐ. ಗದಗ, ಎಸ್.ಸಿ. ಗಂಡಲಾಟಿ, ಎಚ್.ಟಿ. ಬಂಡಿವಡ್ಡರ, ಐ.ಡಿ. ಭಾವಿಮನಿ, ಎಂ.ಆರ್. ಗೋಲಂದಾಜ್, ವೈ.ಎಸ್. ಮೇಟಿ, ಎಚ್.ಜೆ. ಜಾಧವ ಮತ್ತು ಡಿ.ವೈ. ಮುಮ್ಮಿಗಟ್ಟಿ, ಎನ್.ವೈ. ಭರಮನ್ನವರ, ಯು.ಆರ್. ಮೆಟ್ಟಿನ, ಎ.ಎನ್. ಚಿಕಣಿ, ಎಂ.ಎಸ್. ಕೊಟಂಕಿ ಅವರನ್ನು ಸನ್ಮಾನಿಸಲಾಯಿತು.ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪರೇಡ್ ಕಮಾಂಡರ್ ಎಫ್.ಆರ್. ಡೊಕ್ಕಣ್ಣನವರ ಮತ್ತು ಆರ್.ಎಸ್. ಗುಡನಟ್ಟಿ ಮುಂದಾಳತ್ವದಲ್ಲಿ ಆಕರ್ಷಕ ಪಥ ಸಂಚಲನ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ವೈ.ಎಫ್. ಭಜಂತ್ರಿ ಹಾಗೂ ಸಾಗರ ಬಸರಿಕೋಡಿ ನೇತೃತ್ವದ ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡವು ಆಕರ್ಷಕ ರಾಷ್ಟ್ರಗೀತೆ ಪ್ರಸ್ತುತಪಡಿಸಿತು. ಡಿಎಸ್ಪಿ ಶಿವಾನಂದ ಕಟಗಿ, ಗ್ರಾಮೀಣ ವೃತ್ತದ ಡಿಎಸ್ಪಿ ವಿನೋದ ಮುಕ್ತೆದಾರ ಹಾಗೂ ಇತರೆ ಅಧಿಕಾರಿಗಳು ಇದ್ದರು.