ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ, ಅಶಾಂತಿ ಸೃಷ್ಟಿಯಾಗದಂತೆ, ಜಾತಿ-ಮತ ಭೇದವಿಲ್ಲದೆ ಈದ್ ಮಿಲಾದ್ ಹಬ್ಬದ ಆಚರಣೆ ನಡೆಸ ಬೇಕಿದ್ದು, ಶಾಂತಿಯುತ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಜಾನ್ಸನ್ ಡಿಸೋಜ ಹೇಳಿದರು.

ಕನ್ನಡಪ್ರಭವಾರ್ತೆ ಪುತ್ತೂರು

ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ, ಅಶಾಂತಿ ಸೃಷ್ಟಿಯಾಗದಂತೆ, ಜಾತಿ-ಮತ ಭೇದವಿಲ್ಲದೆ ಈದ್ ಮಿಲಾದ್ ಹಬ್ಬದ ಆಚರಣೆ ನಡೆಸ ಬೇಕಿದ್ದು, ಶಾಂತಿಯುತ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಜಾನ್ಸನ್ ಡಿಸೋಜ ಹೇಳಿದರು.ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಗಳ ಅಧ್ಯಕ್ಷರು- ಪದಾಧಿಕಾರಿಗಳೊಂದಿಗೆ ಶಾಂತಿಸಭೆ ನಡೆಸಿದರು.

ನಗರ ಠಾಣಾ ವ್ಯಾಪ್ತಿಯ ೩೩ ಮಸೀದಿಗಳಲ್ಲಿ ಹಬ್ಬದ ಆಚರಣೆಯ ಭಾಗವಾಗಿ ನಡೆಯುವ ಮೆರವಣಿಗೆ, ರ್ಯಾಲಿಯ ವಿವರಗಳನ್ನು ಪಡೆದುಕೊಂಡರು. ನಿಮ್ಮ ಮೆರವಣಿಗೆಗಳು ಯಾವ ರೀತಿ ಇರುತ್ತದೆ ಎಂಬುದರ ವಿವರ ನೀಡಿ, ಕಾನೂನು ಚೌಕಟಿನಲ್ಲಿ ಅನುಮತಿ ನೀಡಿ ಬಂದೋಬಸ್ತ್ ಒದಗಿಸುತ್ತೇವೆ. ಎಲ್ಲಿಯೂ ಕೂಡ ಬೈಕ್ ರ್ಯಾಲಿಗೆ ಅವಕಾಶ ಇರುವುದಿಲ್ಲ, ಬೈಕಿಗೆ ಅವಕಾಶ ನೀಡಿದರೆ ಯುವಕರು ತಮ್ಮ ಚೇಷ್ಠೆಯ ಮೂಲಕ ಒಂದಷ್ಟು ಗೊಂದಲ ಸೃಷ್ಟಿಸುತ್ತಾರೆ. ಹೀಗಾಗಿ ಕೇವಲ ಕಾಲ್ನಡಿಗೆಯ ಜಾಥಾಗಳಿಗೆ ಮಾತ್ರ ಅವಕಾಶವಿರುತ್ತದೆ. ಅದರ ಸೀಮಿತ ಸಂಖ್ಯೆಯ ವಾಹನಗಳಿಗೆ ಅವಕಾಶ ಇರುತ್ತದೆ ಎಂದರು.

ರಾತ್ರಿ ೧೦ರೊಳಗೆ ಮುಕ್ತಾಯ ಕಡ್ಡಾಯ: ಆ. ೨೫ರಂದು ಸಂಜೆ ೪.೩೦ಕ್ಕೆ ಪುತ್ತೂರಿನ ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡೆದು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದರು. ಕಿಲ್ಲೆ ಮೈದಾನದ ಸಭಾ ಕಾರ್ಯಕ್ರಮಕ್ಕೆ ನಗರಸಭೆಯಿಂದ ಅನುಮತಿ ಪಡೆಯಬೇಕು. ಮೆರವಣಿಗೆಯಲ್ಲಿ ಕಾಲ್ನಡಿಗೆಗೆ ಮಾತ್ರ ಅವಕಾಶವಿದ್ದು, ಯಾವುದೇ ಕಾರಣಕ್ಕೂ ಸಂಚಾರಕ್ಕೆ ತೊಂದರೆ ಆಗಬಾರದು, ಜತೆಗೆ ರಾತ್ರಿ ೧೦ರೊಳಗೆ ಎಲ್ಲವೂ ಮುಗಿಯಬೇಕು, ಮೆರವಣಿಗೆಯನ್ನು ತಡ ಮಾಡಿ ಬಳಿಕ ಸಭಾ ಕಾರ್ಯಕ್ರಮಕ್ಕೆ ತೊಂದರೆಯಾದರೆ ಪೊಲೀಸ್ ಇಲಾಖೆ ಜವಾಬ್ದಾರಿ ಅಲ್ಲ, ೧೦ರೊಳಗೆ ಮುಗಿಯುವುದು ಕಡ್ಡಾಯವಾಗಿದೆ ಎಂದು ಇನ್‌ಸ್ಪೆಕ್ಟರ್‌ ಸೂಚನೆ ನೀಡಿದರು.

ಅಪ್ರಾಪ್ತರಿಗೆ ವಾಹನ ನೀಡಬೇಡಿ: ಮೆರವಣಿಗೆಯ ಸಂದರ್ಭದಲ್ಲಿ ಮಕ್ಕಳು ಮನೆಯವರು, ಸಂಘಟಕರಿಗೆ ತಿಳಿಯದ ರೀತಿಯಲ್ಲಿ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸದೆ ಬೈಕಿನಲ್ಲಿ ಬರುವ ಘಟನೆಗಳು ನಡೆಯುತ್ತದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ಅವಕಾಶ ನೀಡಬಾರದು, ಜತೆಗೆ ಕಾರು, ಇತರ ವಾಹನಗಳನ್ನೂ ಮಕ್ಕಳಿಗೆ ನೀಡಬಾರದು ಎಂದು ನಗರ ಠಾಣಾ ಪಿಎಸ್‌ಐ ಸೇಸಮ್ಮ ತಿಳಿಸಿದರು.

ಕಬಕ ದಿಂದ ಮಂಜಲ್ಪಡ್ಪು ತನಕ ಮೆರವಣಿಗೆ: ಕಬಕದಿಂದ ಮಂಜಲ್ಪಡ್ಪು ತನಕ ನಡೆಯುವ ಅಲಂಕೃತ ವಾಹನಗಳ ಮೆರವಣಿಗೆ, ಪೇರಮಜಲು- ಸತ್ತಿಕಲ್ಲು ಭಾಗದ ಮೆರವಣಿಗೆಯ ಕುರಿತು ಆಯಾ ಭಾಗದ ಮುಖಂಡರು ಸಭೆಗೆ ವಿವರ ನೀಡಿದರು. ಜತೆಗೆ ಪ್ರತಿ ಮಸೀದಿಗಳಲ್ಲಿ ನಡೆಯುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸುಹಾಸ್ ಆರ್. ಉಪಸ್ಥಿತರಿದ್ದರು.