ನೊಂದವರ ಧ್ವನಿಯಾಗಿ ಪೊಲೀಸ್‌ ಇಲಾಖೆಯ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಬಸವರಾಜ

| Published : Oct 22 2024, 12:24 AM IST

ನೊಂದವರ ಧ್ವನಿಯಾಗಿ ಪೊಲೀಸ್‌ ಇಲಾಖೆಯ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆ ಕಾರ್ಯದಲ್ಲಿ ನಿರಂತರ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.

ಗದಗ: ಸಮಾಜದ ಒಳತಿಗಾಗಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು, ನೊಂದವರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪೊಲೀಸ್ ಇಲಾಖೆಯ ಸೇವೆ ಅಪಾರವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.

ಸೋಮವಾರ ನಗರದ ಜಿಲ್ಲಾ ಪೊಲೀಸ ಕಚೇರಿ ಆವರಣದಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ನೆನಪಿಗಾಗಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆ ಕಾರ್ಯದಲ್ಲಿ ನಿರಂತರ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದೆ. ಇಂತಹ ಕಾರ್ಯದಿಂದಾಗಿಯೇ ಪೊಲೀಸರ ತ್ಯಾಗ, ಬಲಿದಾನ, ಸಾಹಸ ಸ್ಮರಣೀಯವಾದುದು ಎಂದರು.

ಪೊಲೀಸ ಇಲ್ಲದ ಸಮಾಜ ಕಲ್ಪಿಸಿಕೊಳ್ಳುವುದು ಅಸಾಧ್ಯ. ಅನ್ಯಾಯ, ಸುಲಿಗೆ ತಡೆದು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆ ನಿಲ್ಲಲು ಪೊಲೀಸ್ ಇಲಾಖೆಯ ಶ್ರಮ ಅಪರಮಿತ. ಭಯೋತ್ಪಾದನೆ ನಿರ್ಮೂಲನೆಗೆ ಪ್ರಾಣತ್ಯಾಗಕ್ಕೂ ಪೊಲೀಸರು ಸಿದ್ಧ. ಇದಕ್ಕೆ ಉದಾಹರಣೆ ಸಂಸದ್ ಭವನದ ಮೇಲಿನ ಹಾಗೂ ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿ ಸಾಕ್ಷಿಯಾಗಿವೆ.

ಸಾರ್ವಜನಿಕರು ಅಪರಾಧ ನಡೆದಾಗ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ಸೂಕ್ತ ಸಹಕಾರ ನೀಡಬೇಕು. ಅಲ್ಲದೇ ಭಯೋತ್ಪಾದನೆಯಂತಹ ಕೃತ್ಯಗಳು ನಡೆದಾಗ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಮಾಯಕರ ಜೀವಹಾನಿ ತಪ್ಪಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಇರಬೇಕು.

ಪೊಲೀಸರ ನಿರಂತರ ಒತ್ತಡದ ಕೆಲಸಕ್ಕೆ ಅವರ ಕುಟುಂಬ ನೀಡುವ ನೈತಿಕ ಬೆಂಬಲ ಸ್ಮರಣೀಯವಾಗಿದೆ. ನಿರಂತರ ಕಾರ್ಯನಿರ್ವಹಣೆಯಲ್ಲಿ ಪೊಲೀಸರು ಸದಾಸಿದ್ಧ ಎಂಬ ಸಂದೇಶವನ್ನು ಹಲವಾರು ಸಂದರ್ಭದಲ್ಲಿ ಸಾಬೀತು ಪಡಿಸಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಭಾರತ-ಚೀನಾ ಗಡಿಯಲ್ಲಿ ಚೀನಾ ಸೇನೆಯಿಂದ ಅಕ್ಟೋಬರ್‌ 21,1959ರಲ್ಲಿ ನಡೆದ ದಾಳಿಯಲ್ಲಿ ಹತ್ತಕ್ಕೂ ಪೊಲೀಸರು ಹುತಾತ್ಮರಾದರು. ಇದರ ನೆನಪಿಗಾಗಿ ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಪೊಲೀಸ್ ಹುತಾತ್ಮ ದಿನ ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಶದಲ್ಲಿ 216 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು 2024ರಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದು, ಇದರಲ್ಲಿ ಗದಗ ಜಿಲ್ಲೆಯ ಮೂವರು ಪೊಲೀಸರು ಸೇರಿದ್ದಾರೆ ಎಂದು ಅವರ ಹೆಸರನ್ನು ಸ್ಮರಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅವರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ನರಗುಂದ ಡಿಎಸ್‌ಪಿ ಪ್ರಭುಗೌಡ ತೀರದಳ್ಳಿ, ಡಿಎಆರ್‌ಡಿ ಎಸ್ಪಿ ವಿದ್ಯಾನಂದ ನಾಯಕ, ಸಿಇಎನ್ ಘಟಕದ ಡಿಎಸ್‌ಪಿ ಮಹಾಂತೇಶ ಸಜ್ಜನರ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.

ಗದಗ ಬೆಟಗೇರಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಎಸ್.ಎನ್. ಬಳ್ಳಾರಿ, ರಾಮಣ್ಣ ಫಲದೊಡ್ಡಿ, ಚಿನ್ಮಯ ಹೆಗಡೆ, ಗಣೇಶ ಬ್ಯಾಳಿ, ಬಾಷಾಸಾಬ ಮಲ್ಲಸಮುದ್ರ, ಚಂದ್ರಕಾಂತ ಚವ್ಹಾಣ, ಪೊಲೀಸ್ ಇಲಾಖೆಯ ಪ್ರಭಾರ ಸಹಾಯಕ ಆಡಳಿತಾಧಿಕಾರಿ ಮಲ್ಲನಗೌಡ ಕೆ.ಎಚ್., ಬೆಟಗೇರಿ ಸಿಪಿಐ ಡಿ.ಬಿ. ಸಿಂಧೆ, ಗದಗ ಗ್ರಾಮೀಣ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಮಹಿಳಾ ಪಿಎಸ್‌ಐ ಶಕುಂತಲಾ, ಬಿ.ಎಸ್. ಬಾರಕೇರ, ಸಿ.ಎಸ್. ಜಕ್ಕನಗೌಡ್ರ, ಎನ್. ಬಿ. ಭಂಗಿ, ಎಸ್.ಎಸ್. ಹೂಲಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ರಾಮು ವಗ್ಗಿ, ಗಣೇಶ ಪೈ ಗೌರವ ಸಮರ್ಪಿಸಿದರು.

ಗದಗ ಜಿಲ್ಲೆಯ ಹುತಾತ್ಮ ಪೊಲೀಸರ ಪತ್ನಿಯರಾದ ಭಾರತಿ ಗಾಳರೆಡ್ಡಿ, ದೀಪಾ ವಿಠಲಾಪುರ, ರೇಣುಕಾ ಡಂಬಳ ಸಹ ಪುಷ್ಪ ನಮನ ಸಲ್ಲಿಸಿದರು. ಪರೇಡ್ ಕಮಾಂಡರ್ ಶಂಕರಗೌಡ ಚೌಧರಿ ನೇತೃತ್ವದಲ್ಲಿ ಪರೇಡ್ ನಡೆಯಿತು. ಎನ್.ಟಿ. ಭಟ್ ನಿರೂಪಿಸಿದರು.