ಶಾಂತಿ, ಸುವ್ಯವಸ್ಥೆ ಕಾಪಾಡಲು ಮನೆ ಮನೆಗೆ ಪೊಲೀಸ್

| Published : Jul 29 2025, 01:04 AM IST

ಸಾರಾಂಶ

ಸರ್ಕಾರದ ಆದೇಶದಂತೆ ಮನೆ ಮನೆಗೆ ಹೋಗಿ ಪ್ರತಿಯೊಂದು ಮನೆಯ ಸದಸ್ಯರ ಮಾಹಿತಿ ಕಲೆಹಾಕಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನ ಪಡುತ್ತೇವೆ.

ಶಿಗ್ಗಾಂವಿ: ಪ್ರತಿಯೊಂದು ಮನೆಯ ಸದಸ್ಯರೊಂದಿಗೆ ಬೆರೆತು ನಿರ್ಭಯ ವಾತಾವರಣ ಸೃಷ್ಟಿಸಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಎಎಸ್ಐ ಪಿ.ಆರ್. ಕೋಳೂರ ತಿಳಿಸಿದರು.ಪಟ್ಟಣದ ೧ನೇ ವಾರ್ಡಿನ ಮೈಲಾರಲಿಂಗೇಶ್ವರ ದೇವಸ್ಥಾನ ಹತ್ತಿರ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಆದೇಶದಂತೆ ಮನೆ ಮನೆಗೆ ಹೋಗಿ ಪ್ರತಿಯೊಂದು ಮನೆಯ ಸದಸ್ಯರ ಮಾಹಿತಿ ಕಲೆಹಾಕಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನ ಪಡುತ್ತೇವೆ. ಆದ್ದರಿಂದ ಮುಕ್ತ ಮನಸ್ಸಿನಿಂದ ಸಮಸ್ಯೆಗಳನ್ನು ತಿಳಿಸಿ ಎಂದರು.ಹವಾಲ್ದಾರ್ ಎಂ.ಎಸ್. ಸೂರಗೊಂಡ ಮಾತನಾಡಿ, ಮಾಹಿತಿ ಕಲೆಹಾಕಿದ ೪೦- ೫೦ ಮನೆಯ ಸದಸ್ಯರ ವಾಟ್ಸ್ಆ್ಯಪ್ ಗುಂಪು ಮಾಡಿ ಅದರ ಮುಖಾಂತರ ಮಾಹಿತಿ ಕ್ರೋಡೀಕರಿಸಿ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಕಾನೂನು ಪ್ರಕಾರ ಪ್ರಯತ್ನಿಸಲಾಗುವುದು ಎಂದರು.ಮನೆಯ ಮಾಲೀಕರಾದ ರಾಮಚಂದ್ರ ಶ್ರೀನಿವಾಸ ದೈವಜ್ಞ, ಬಾಡಿಗೆದಾರ ಗದಿಗೆಪ್ಪ ಹುಯಿಲಗೋಳ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ರಸ್ತೆಬದಿ ಇಸ್ಪಿಟ್ ಜೂಜಾಟ: ಲಕ್ಷಾಂತರ ರು. ಹಣ ಜಪ್ತಿ

ರಾಣಿಬೆನ್ನೂರು: ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ ಲಕ್ಷಾಂತರ ರು. ಹಣ ಜಪ್ತಿ ಮಾಡಿದ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ 48ರ ತಾಲೂಕಿನ ಮಾಕನೂರ ಗ್ರಾಮದಲ್ಲಿ ಜರುಗಿದೆ.ಘಟನೆಗೆ ಸಂಬಂಧಿಸಿದಂತೆ ಕವಲೆತ್ತು ಗ್ರಾಮದ ಅಷ್ಟಮೂರ್ತಿ ಓಲೇಕಾರ, ಹನುಮಂತಪ್ಪ ಹೊನ್ನಪ್ಪನವರ, ಕರಬಸಪ್ಪ ಕಂಬಳಿ, ಹನುಮಂತಪ್ಪ ಹಳ್ಳೆಳ್ಳಪ್ಪನವರ ಹಾಗೂ ನಲವಾಗಲು ಗ್ರಾಮದ ಗಣೇಶ ಹಿತ್ತಲಮನಿ ಎಂಬವರನ್ನು ಬಂಧಿಸಿ ಅವರ ಬಳಿಯಿಂದ ₹1.74 ಲಕ್ಷ ನಗದು ಹಾಗೂ ಜೂಜಾಟವಾಡಲು ಬಳಸುತ್ತಿದ್ದ ಎರಡರಿಂದ ಮೂರು ಸೆಟ್ ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.