ಮನೆಗೆ ತೆರಳಲು ಪೊಲೀಸರು ಇನ್ನೂ ಅನುಮತಿ ನೀಡಿಲ್ಲ: ಜಯಂತ್‌ ಗೌಡ

| Published : Nov 24 2024, 01:45 AM IST

ಮನೆಗೆ ತೆರಳಲು ಪೊಲೀಸರು ಇನ್ನೂ ಅನುಮತಿ ನೀಡಿಲ್ಲ: ಜಯಂತ್‌ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರು ನಮ್ಮ ಮನೆಯನ್ನು ಖಾಲಿ ಮಾಡಿದ್ದಲ್ಲ, ಹುಷಾರಿಲ್ಲ ಎಂದು ನಾವೇ ಮನೆಯಿಂದ ಬಂದಿದ್ದೆವು. ಆ ಕಡೆ ಈ ಕಡೆ ಮನೆಯಲ್ಲಿ ಯಾರಿದ್ದಾರೆ ಗೊತ್ತಿಲ್ಲ, ಹೋಗಿ ನೋಡಬೇಕು. ನಕ್ಸಲರ ಬಗ್ಗೆ ಈವರೆಗೆ ನಮಗೆ ಭಯ ಇಲ್ಲ ಮುಂದೆ ಏನು ಗೊತ್ತಿಲ್ಲ. ಮುಂದೆ ಏನು, ಎತ್ತ ಎಂದು ಪೊಲೀಸರ ಬಳಿ ಕೇಳಬೇಕು ಎಂದು ಜಯಂತ್‌ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಮಗನ ಕೈಮುರಿತಕ್ಕೊಳಗಾಗಿ ಚಿಕಿತ್ಸೆಗಾಗಿ ಮಗಳ ಮನೆಗೆ 13 ದಿನ ಹಿಂದೆ ಬಂದಿದ್ದೆವು. ಪೀತಬೈಲ್‌ ಮನೆಯಲ್ಲಿ ಏನಾಯ್ತು ಎಂದು ನಮಗೆ ಗೊತ್ತಿಲ್ಲ, ಟಿವಿ ನೋಡುವಾಗ ಎನ್‌ಕೌಂಟರ್ ಆಗಿರೋ ವಿಚಾರ ಗೊತ್ತಾಯಿತು. ನಾನು ಇನ್ನೂ ಮನೆಗೆ ಹೋಗಿಲ್ಲ, ಹೋದಮೇಲೆ ಪರಿಸ್ಥಿತಿ ಗೊತ್ತಾಗುತ್ತದೆ. ಮನೆಗೆ ತೆರಳಲು ಪೊಲೀಸರು ಈವರೆಗೆ ಅನುಮತಿ ನೀಡಿಲ್ಲ, ಸದ್ಯಕ್ಕೆ ನಮಗೆ ಪೊಲೀಸರ ಭಯ ಇಲ್ಲ ಎಂದು ವಿಕ್ರಂ ಗೌಡ ಎನ್‌ಕೌಂಟರ್‌ ನಡೆದ ಮನೆಯ ಮಾಲೀಕ ಜಯಂತ್‌ ಗೌಡ ಹೇಳಿದ್ದಾರೆ.

ನಕ್ಸಲ್ ವಿಕ್ರಮ್ ಗೌಡ ಎನ್‌ಕೌಂಟರ್‌ ನಡೆದ ಬಳಿಕ ಪೀತಬೈಲ್ ಮನೆಯ ಜಯಂತ ಗೌಡ ಅವರು, ಹೆಬ್ರಿಯ ಪೊಲೀಸ್ ವಿಚಾರಣೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪೊಲೀಸರು, ಏನಾಯ್ತು ಎಂದೆಲ್ಲ ವಿಚಾರಣೆ ಮಾಡಿದರು. ಮನೆಯಲ್ಲಿ ನಡೆದ ಘಟನೆಯ ಬಗ್ಗೆ ವಿವರಣೆಯನ್ನೂ ಕೇಳಿದ್ದಾರೆ. ವಿಮೋಚನಾ ರಂಗ ಹೋರಾಟ ಎಂದು ಮನೆಗೆ 15 ವರ್ಷದ ಹಿಂದೆ 2 ಬಾರಿ ನಕ್ಸಲರು ಬಂದಿದ್ದರು. ಮಕ್ಕಳು ಸಣ್ಣ ಇದ್ದ ಕಾರಣ ಯಾವುದೇ ಹೋರಾಟಕ್ಕೆ, ಪ್ರತಿಭಟನೆಗೆ ಹೋಗಿಲ್ಲ ಎಂದರು.

ಪೊಲೀಸರು ನಮ್ಮ ಮನೆಯನ್ನು ಖಾಲಿ ಮಾಡಿದ್ದಲ್ಲ, ಹುಷಾರಿಲ್ಲ ಎಂದು ನಾವೇ ಮನೆಯಿಂದ ಬಂದಿದ್ದೆವು. ಆ ಕಡೆ ಈ ಕಡೆ ಮನೆಯಲ್ಲಿ ಯಾರಿದ್ದಾರೆ ಗೊತ್ತಿಲ್ಲ, ಹೋಗಿ ನೋಡಬೇಕು. ನಕ್ಸಲರ ಬಗ್ಗೆ ಈವರೆಗೆ ನಮಗೆ ಭಯ ಇಲ್ಲ ಮುಂದೆ ಏನು ಗೊತ್ತಿಲ್ಲ. ಮುಂದೆ ಏನು, ಎತ್ತ ಎಂದು ಪೊಲೀಸರ ಬಳಿ ಕೇಳಬೇಕು. ಮನೆಗೆ ಯಾವಾಗ ಹೋಗಬೇಕು ಎಂದು ಎರಡು ದಿನ ಬಿಟ್ಟು ಪೊಲೀಸರು ಹೇಳುತ್ತಾರೆ ಎಂದು ತಿಳಿಸಿದ್ದಾರೆ.

ನಕ್ಸಲ್ ವಿಕ್ರಮ್ ಗೌಡ ಎನ್‌ಕೌಂಟರ್‌ ಬಳಿಕ ಈ ಭಾಗದಲ್ಲಿ ಎಎನ್‌ಎಫ್ ಕೂಂಬಿಂಗ್ ಮುಂದುವರಿಸಿದೆ. ಕಾರ್ಕಳ ತಾಲೂಕಿನ ಈದು, ಮಾಳ,‌‌ ಶೃಂಗೇರಿಯ ಕೆರೆ ಕಟ್ಟೆ ಸೇರಿದಂತೆ ಕಿಗ್ಗ, ಹೆಬ್ರಿ ತಾಲೂಕಿನ ನಾಡ್ಪಾಲು, ಕೂಡ್ಲು ಭಾಗಗಳಲ್ಲಿ ಕೂಂಬಿಂಗ್ ಬಿಗುಗೊಳಿಸಲಾಗಿದೆ.