ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ ಪೊಲೀಸರಿಗೆ ಉರಿ ಬಿಸಿಲಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ವಿಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.ಕರ್ತವ್ಯ ನಿರ್ವಹಣೆಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಉದಾಸೀನ ತೋರಿದ ಕಾರಣ ಠಾಣೆಯ ಪಿಎಸ್ಐ ನೇತ್ರಾವತಿ ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಎಎಸ್ಐ ಸೇರಿದಂತೆ 12 ಮಂದಿ ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ವರೆಗೂ ಠಾಣೆ ಮುಂಭಾಗ ಹೆಗಲ ಮೇಲೆ ಬಂದೂಕು ಹೊತ್ತು ನಿಂತಿದ್ದಾರೆ. ಇವರಲ್ಲಿ ಮೂವರು ಮಹಿಳಾ ಸಿಬ್ಬಂದಿ ಸೇರಿರುವುದು ವಿಶೇಷ. ಪೊಲೀಸರ ಬಿಸಿಲಲ್ಲಿ ನಿಲ್ಲಿಸಿರುವ ದೃಶ್ಯ ಕಂಡು ನಾಗರಿಕರು ಅವಕ್ಕಾಗಿದ್ದಾರೆ. ಮಕ್ಕಳಿಗೆ ಮಾತ್ರ ಶಾಲೆ ಹೊರ ಭಾಗ ನಿಲ್ಲಿಸುವ ಶಿಕ್ಷೆ ವಿಧಿಸುವುದ ಕಂಡಿದ್ದ ಜನರಿಗೆ ಪೊಲೀಸರಿಗೂ ಶಿಕ್ಷೆ ಇದೆ ಎಂಬುದು ಅಚ್ಚರಿ ಮೂಡಿಸಿದೆ.ಬಿಸಿಲಲ್ಲಿ ನಿಂತ ಕಾರಣಕ್ಕೆ ಕೆಲ ಸಿಬ್ಬಂದಿ ಆರೋಗ್ಯದಲ್ಲಿ ಏರು ಪೇರಾಗಿದ್ದು ಹೊಳಲ್ಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಎನ್ನಲಾಗಿದೆ. ಪೊಲೀಸರಿಗೆ ಶಿಕ್ಷೆ ವಿಧಿಸಿದ ಪಿಎಸ್ಐ ನಡೆ ಎಸ್ಪಿ ರಂಜಿತ್ ಕುಮಾರ್ ಬಂಡಾರುಗೆ ತಲುಪಿದ್ದು ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ಗಿರೀಶ್ ಗೌಡ ಅವರಿಗೆ ಸೂಚನೆ ನೀಡಿದ್ದಾರೆ.