ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್ ಸೇವೆ ತೃಪ್ತಿಕರ : ಪುಟ್ಟುಸಿಂಗ್

| Published : Apr 03 2025, 12:31 AM IST

ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್ ಸೇವೆ ತೃಪ್ತಿಕರ : ಪುಟ್ಟುಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಮೂರ್ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನ ಮತ್ತು ಸೂಕ್ತ ಸಲಹೆಯಿಂದಾಗಿ ಸಲ್ಲಿಸಿದ ಪೊಲೀಸ್ ಸೇವೆ ತೃಪ್ತಿಕರವೆನಿಸಿದೆ ಎಂದು ನಿವೃತ್ತ ಎಎಸ್‌ಐ ವಿ.ಎನ್.ಪುಟ್ಟುಸಿಂಗ್‌ ಹೇಳಿದರು.

ಶಿವಮೊಗ್ಗ: ಮೂರ್ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನ ಮತ್ತು ಸೂಕ್ತ ಸಲಹೆಯಿಂದಾಗಿ ಸಲ್ಲಿಸಿದ ಪೊಲೀಸ್ ಸೇವೆ ತೃಪ್ತಿಕರವೆನಿಸಿದೆ ಎಂದು ನಿವೃತ್ತ ಎಎಸ್‌ಐ ವಿ.ಎನ್.ಪುಟ್ಟುಸಿಂಗ್‌ ಹೇಳಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಘಟಕ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ತಮ್ಮ ಸೇವಾ ಅವಧಿಯಲ್ಲಿ ಕಾರ್ಯಕ್ಷೇತ್ರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ನನಗಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿ ಅಧಿಕಾರಿ-ಸಿಬ್ಬಂದಿಯೂ ಭಯ ಮತ್ತು ಒತ್ತಡದಿಂದ ಮುಕ್ತಗೊಂಡು ಕೆಲಸ ನಿರ್ವಹಿಸಬೇಕು ಎಂದರು.

ಪೊಲೀಸರು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಕುಟುಂಬದ ಬಗ್ಗೆಯೂ ಕಾಳಜಿ ವಹಿಸಬೇಕು. ಇಲಾಖೆಯು ಪೊಲೀಸ್‌ ಅಧಿಕಾರಿ-ಸಿಬ್ಬಂದಿಗಳಿಗಾಗಿ ನೀಡಿದ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ವಾರ್ಷಿಕ ವರದಿ ವಾಚಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮ ಹಾಗೂ ಪೊಲೀಸರ ಸೇವೆ, ತ್ಯಾಗ, ಬಲಿದಾನಗಳ ಸ್ಮರಣಾರ್ಥವಾಗಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.ಪೊಲೀಸ್ ಧ್ವಜವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಆಹ್ವಾನಿತ ಗಣ್ಯರು ಬಿಡುಗಡೆಗೊಳಿಸಿದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಇದ್ದರು.ಧ್ಚಜ ದಿನಾಚರಣೆಯ ಅಂಗವಾಗಿ 6 ಪೊಲೀಸ್ ತಂಡಗಳು ನಿಧಾನ ಹಾಗೂ ತೀವ್ರಗತಿಯ ಪಥಸಂಚಲನ ನಡೆಸಿದವು. ಆರ್.ಪಿ.ಐ. ಪ್ರಶಾಂತ್ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಸಶಸ್ತ್ರ ಮೀಸಲು ಪಡೆಯ ಸಬ್‌ಇನ್ಸ್‌ಪೆಕ್ಟರ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಆಕರ್ಷಕ ಪೊಲೀಸ್ ಬ್ಯಾಂಡ್ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.