ಸಾರಾಂಶ
ರಟ್ಟೀಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಫುಟ್ಪಾತ್ನಲ್ಲಿ ಅನೇಕ ವರ್ಷಗಳಿಂದ ಅನಧಿಕೃತವಾಗಿ ರಿಪೇರಿಯಲ್ಲಿರುವ ವಾಹನಗಳನ್ನು ನಿಲ್ಲಿಸಲಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹಿರೇಕೆರೂರು ಠಾಣೆಯ ಸಿಪಿಐ ಬಸವರಾಜ ಪಿ.ಎಸ್. ಅವರು ಗ್ಯಾರೇಜಿನ ಮಾಲೀಕರಿಗೆ ತಾಕೀತು ಮಾಡಿದರು.ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಪಟ್ಟಣದ ಚೂರಿ ಪೆಟ್ರೋಲ್ ಬಂಕ್ನಿಂದ ಐಬಿಯವರೆಗೂ ರಸ್ತೆಬದಿ ಫುಟ್ಪಾತ್ನಲ್ಲಿ ಎಲೆಕ್ಟ್ರಿಕಲ್ ಅಂಗಡಿಯವರು, ತಳ್ಳುಗಾಡಿ ವ್ಯಾಪಾರಸ್ಥರು, ಗ್ಯಾರೇಜಿನವರು ಕೆಟ್ಟು ನಿಂತ ವಾಹನಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ವೇಗವಾಗಿ ಚಲಿಸುತ್ತವೆ. ಅಲ್ಲದೇ ನೂರಾರು ಸಾರ್ವಜನಿಕರು ಓಡಾಡುವ ಪ್ರಮುಖ ರಸ್ತೆಯಾದ ಕಾರಣ ಪ್ರತಿದಿನ ಒಂದಿಲ್ಲೊಂದು ಅಪಘಾತ, ಸಾವು- ನೋವುಗಳು ಸರ್ವೇಸಾಮಾನ್ಯ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿದೆ ಎಂದರು.ಗ್ಯಾರೇಜ್ ಮಾಲೀಕರು, ವ್ಯಾಪಾರಸ್ಥರು ತಕ್ಷಣ ಫುಟ್ಪಾತ್ನಲ್ಲಿ ನಿಲ್ಲಿಸಿರುವ ನಿರುಪಯುಕ್ತ ವಾಹನಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು. ತಕ್ಷಣ ತೆರವು ಮಾಡದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಫುಟ್ಬಾತ್ ನಿರ್ಮಾಣ ಮಾಡಲಾಗಿದೆ. ಆದರೆ ಫುಟ್ಪಾತ್ನಲ್ಲಿ ನಿಲ್ಲಿಸಿರುವ ವಾಹನಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ವಾಹನಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದರು. ಆದರೂ ವ್ಯಾಪಾಪಸ್ಥರು ಸ್ಪಂದಿಸಿರಲಿಲ್ಲ. ಕೂಡಲೇ ತೆರವು ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.