ಸಾರಾಂಶ
ನಾನು ಧರ್ಮ ವಿರೋಧಿಯಲ್ಲ. ಕುಂಭ ಮೇಳಕ್ಕೆ ಹೋಗುವುದು ಅವರವರ ನಂಬಿಕೆ. ಆದರೆ ನಾನು ಹೋಗದ್ದನ್ನೇ ವಿಚಾರವಾಗಿಸಿ ದುರ್ಬಳಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸುವುದಕ್ಕಾಗಿ ಕೇಸ್ ದಾಖಲಿಸಿದ್ದೇನೆ ಎಂದು ಹಿರಿಯ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕುಂಭ ಮೇಳಕ್ಕೆ ನಾನು ಹೋಗಿಲ್ಲ ಎನ್ನುವುದನ್ನೇ ವಿಚಾರವಾಗಿಸಿ, ನನ್ನ ಇಚ್ಛೆಗೆ ವಿರುದ್ಧವಾಗಿ ಎಐ ಫೋಟೊ ಸೃಷ್ಟಿಸಿ ಜಾಲತಾಣದಲ್ಲಿ ಹರಿಯಬಿಟ್ಟದ್ದು ಅಕ್ಷಮ್ಯ ಅಪರಾಧ. ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎಂದು ಹಿರಿಯ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಧರ್ಮ ವಿರೋಧಿಯಲ್ಲ. ಕುಂಭ ಮೇಳಕ್ಕೆ ಹೋಗುವುದು ಅವರವರ ನಂಬಿಕೆ. ಆದರೆ ನಾನು ಹೋಗದ್ದನ್ನೇ ವಿಚಾರವಾಗಿಸಿ ದುರ್ಬಳಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸುವುದಕ್ಕಾಗಿ ಕೇಸ್ ದಾಖಲಿಸಿದ್ದೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ನಷ್ಟ ಇದೆ ಹಣ ಹೊಂದಿಸಲು ಆಗುತ್ತಿಲ್ಲ ಎಂದರೆ ಸರ್ಕಾರ ಬ್ಯುಸಿನೆಸ್ ಮಾಡುತ್ತಿದೆಯೇ? ಎಲ್ಲಿ ತಪ್ಪುತ್ತಿದೆ ಎಂದು ಯೋಚಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಗ್ಯಾರಂಟಿ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್ ಫ್ರೀ ಬೀಸ್ ಪ್ಯಾರಸೈಟ್ ಎನ್ನುತ್ತದೆ. ಬಡವರಿಗೆ ಫ್ರೀ ಬೀಸ್ ನೀಡೋದು ಪ್ಯಾರಸೈಟ್ ಹೇಗಾಗುತ್ತೆ? ಹಾಗಾದರೆ ಕಾರ್ಪೊರೇಟ್ ಕಂಪೆನಿಗಳ ಸಾಲ ಮನ್ನಾ ಮಾಡೋದು ಯಾವ ಪ್ಯಾರಸೈಟ್ ಎಂದು ಪ್ರಕಾಶ್ರಾಜ್ ಪ್ರಶ್ನಿಸಿದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ವಿಚಾರದ ಕುರಿತಂತೆ ಪ್ರಶ್ನೆಗೆ, ಅಂಬೇಡ್ಕರ್ ಅವರನ್ನು ಹೇಗೆ ಕೊಲ್ಲಬೇಕು ಅಂತ ಬಿಜೆಪಿ ಯೋಚನೆ ಮಾಡುತ್ತದೆ. ಅತ್ತ ಕಾಂಗ್ರೆಸ್ ಅಂಬೇಡ್ಕರ್ ಅವರನ್ನ ಹೇಗೆ ಉಪಯೋಗಿಸಬೇಕು ಅಂತ ಯೋಚನೆ ಮಾಡುತ್ತದೆ. ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಪ್ರಜೆಗಳಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.