ಸಾರಾಂಶ
ಬೀದಿ ಬದಿ ವ್ಯಾಪಾರಸ್ಥರಿಗೆ ಹೈಟೆಕ್ ತಳ್ಳುಗಾಡಿ ವಿತರಿಸಿದ ಸಚಿವ ಎಚ್ಕೆ
ಗದಗ:ಪ್ರಾಮಾಣಿಕ ಬಡ ಜನರು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಬೀದಿ ಬದಿ ವ್ಯಾಪಾಸ್ಥರು ಸ್ವಾಭಿಮಾನದಿಂದ ತಮ್ಮ ಬದುಕು ಸಾಗಿಸಲು ಅನುವಾಗಲು ಹೈ-ಟೆಕ್ ತಳ್ಳುಗಾಡಿಗಳನ್ನು ವಿತರಿಸಲಾಗುತ್ತಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಭಾನುವಾರ ನಗರದ ಕೆ.ಎಚ್. ಪಾಟೀಲ ವೃತ್ತದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಹೈ-ಟೆಕ್ ತಳ್ಳುಗಾಡಿಗಳನ್ನು ವಿತರಿಸಿ ಮಾತನಾಡಿದರು. ಶತಮಾನಗಳಿಂದ ಸಮಾಜದಲ್ಲಿ ಬಡ ಜನರನ್ನು ಅಸೂಯೆಯಿಂದ ನೋಡಲಾಗುತ್ತಿತ್ತು. ಇಂದಿರಾ ಗಾಂಧಿ ಅವರು ಬಡ ಜನರನ್ನು ಸ್ವಾಭಿಮಾನಿಗಳನ್ನಾಗಿಸುವ ದಿಸೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತದಂತಹ ಧೀಮಂತ ಮಹಿಳೆ. ಬಡ ಜನರ ಏಳಿಗೆಗಾಗಿ ಇಂದಿರಾ ಗಾಂಧಿ ಅವರು ಹಾಕಿ ಕೊಟ್ಟಂತಹ ಕಾರ್ಯಕ್ರಮಗಳು ಇಂದಿಗೂ ಮುಂದುವರೆದಿದ್ದು ಇಂದು ಅವರ ಜನ್ಮ ದಿನದಂದು ಬೀದಿ ಬದಿ ವ್ಯಾಪಾರಸ್ಥರಿಗೆ ಹೈ-ಟೆಕ್ ತಳ್ಳುಗಾಡಿಗಳನ್ನು ವಿತರಿಸುತ್ತಿರುವದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು.ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸುವಲ್ಲಿ ಜಿಲ್ಲೆಯು ಒಂದು ಹೆಜ್ಜೆ ಮುಂದೆ ಇದ್ದು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಧೃಢರಾಗುವಂತೆ ತಿಳಿಸಿದರು. ಈ ಹೈ-ಟೆಕ್ ತಳ್ಳುಗಾಡಿಗಳಲ್ಲಿ ವ್ಯಾಪಾರಸ್ಥರು ತಮ್ಮ ತರಕಾರಿ ಶೇಖರಣೆ ಜೊತೆಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ.ಇಂದು ನಗರದ 145 ಬೀದಿ ಬದಿ ವ್ಯಾಪಾರಸ್ಥರಿಗೆ ಹೈ-ಟೆಕ್ ತಳ್ಳುಗಾಡಿಗಳನ್ನು ವಿತರಿಸಲಾಗಿದ್ದು ಬಾಕಿ ಫಲಾನುಭವಿಗಳಿಗೆ ಬರುವ ಜನವರಿ ಅಂತ್ಯದೊಳಗಾಗಿ ವಿತರಿಸಲಾಗುವುದು ಇದರ ಜೊತೆಗೆ ಬೀದಿ ಬದಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ನಗರದಲ್ಲಿ ಕೋಲ್ಡ್ ಸ್ಟೋರೆಜ್ ಘಟಕ ನಿರ್ಮಾಣ ಕುರಿತು ಮನವಿಗೆ ಸ್ಪಂದಿಸಿ ಜನವರಿ 19ರೊಳಗಾಗಿ ಕೋಲ್ಡ್ ಸ್ಟೋರೆಜ್ ಘಟಕವನ್ನು ನಿರ್ಮಾಣ ಮಾಡಲಾಗುವುದು ಎಂದು ಬೀದಿ ಬದಿ ವ್ಯಾಪಾರಸ್ಥರಿಗೆ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ ವಟಗಲ್, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆ ಸದಸ್ಯರು, ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘದ ಪದಾಧಿಕಾರಿಗಳು, ಗಣ್ಯರು, ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.