ಹಿರೇಕೆರೂರು: ಬಿಜೆಪಿಯಲ್ಲಿ ಹುದ್ದೆಗಳು ಸಿಗುವುದು ಅಷ್ಟು ಸುಲಭವಿಲ್ಲ, ಪಕ್ಷ ಸಂಘಟನೆ, ಜವಾಬ್ದಾರಿ ನಿರ್ವಹಣೆ, ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಪಕ್ಷದ ಎಲ್ಲ ಸೂಚನೆಗಳನ್ನು ಪಾಲಿಸಿದಾಗ ಹುದ್ದೆಗಳು ನಮ್ಮನ್ನೇ ಹುಡುಕೊಂಡು ಬರುತ್ತವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದ ಅವರ ಗೃಹ ಕಚೇರಿಯಲ್ಲಿ ಹಿರೇಕೆರೂರು ತಾಲೂಕು ಬಿಜೆಪಿ ಯುವ ಮೋರ್ಚಾಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ರಟ್ಟೀಹಳ್ಳಿ ತಾಲೂಕು ಬಿಜೆಪಿ ರೈತ ಮೋರ್ಚಾಕ್ಕೆ ನೇಮಕವಾದ ಪದಾಧಿಕಾರಿಗಳಿಗೆ ಆದೇಶದ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.ಪಕ್ಷದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಪದಾಧಿಕಾರಿಗಳು ಪಕ್ಷದ ಕೆಲಸವನ್ನು ತಮ್ಮದೇ ಕೆಲಸ ಎಂದು ಭಾವಿಸಿ ಪಕ್ಷ ಸಂಘಟನೆ ಪ್ರಮುಖ ಆದ್ಯತೆ ನೀಡಬೇಕು. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ನವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಸಹಿಸಲಾಗದೇ, ಇಲ್ಲಸಲ್ಲದ ಪಿತೂರಿ ಮಾಡುತ್ತಿದ್ದಾರೆ. ಇದನ್ನು ಜನತೆಗೆ ಮನವರಿಕೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಕೇಂದ್ರ ಸರ್ಕಾರದ ಕೊಡುಗೆಗಳು, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು ಎಂದು ಪಾಟೀಲ್ ಹೇಳಿದರು.ನಮ್ಮ ಅಧಿಕಾರದ ಅವಧಿಯಲ್ಲಿ ತಾಲೂಕಿನ ಕೆರೆಗಳ ತುಂಬಿಸುವ ಯೋಜನೆಗಳನ್ನು ತಂದಿದ್ದೇವೆ. ರೈತರಿಗೆ ಬಹು ಉಪಯುಕ್ತವಾಗಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಅವುಗಳನ್ನು ತಾಲೂಕಿನ ಜನತೆಗೆ ತಿಳಿಸುವ ಮೂಲಕ ತಳಮಟ್ಟದಿಂದ ಪಕ್ಷವನ್ನು ಮತ್ತಷ್ಟು ಬಲವರ್ಧನೆ ಮಾಡಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ರೈತ ಯುವಶಕ್ತಿಯ ಪಾತ್ರ ಪ್ರಮುಖವಾಗಿದೆ. ಇದನ್ನು ಮನಗಂಡು ತಮ್ಮ ಬೂತ್ ಮಟ್ಟದಲ್ಲಿ ಇಂದಿನಿಂದಲೇ ಪಕ್ಷದ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶಗೌಡ ಗೌಡರ್, ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಮಹೇಶ ಭರಮಗೌಡ್ರ, ಜಗದೀಶ ಲಕ್ಕನಗೌಡ್ರ, ನಾಗರಾಜ ಹಿರೇಮಠ, ಬಸವರಾಜ ಕಾಲ್ವೀಹಳ್ಳಿ, ಸುರೇಶ ದ್ಯಾವಕ್ಕಳವರ, ಪ್ರಶಾಂತ ಮಾಳಗಿ, ಪ್ರದೀಪ ಪಾಟೀಲ, ವಿಜಯ ಮಡಿವಾಳರ, ಜಿಲಾನಿ ಬಳೇಗಾರ, ಎನ್.ಬಿ. ಚಳಗೇರಿ ಇದ್ದರು.