ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ರಸಂಗಗಳು ಮತ್ತು ಅವಕಾಶಗಳು ಮನುಷ್ಯನ ಮೇಧಾವಿ ಶಕ್ತಿ ಹೆಚ್ಚಿಸುತ್ತವೆ ಎಂದು ಸಿದ್ದಾರೂಢ ಆಶ್ರಮದ ಸಹಜಾನಂದ ಶ್ರೀಗಳು ಹೇಳಿದರು.ಸ್ಥಳೀಯ ಸಿದ್ಧಾರೂಢ ಆಶ್ರಮದ ಸಾಂಸ್ಕೃತಿಕ ಭವನದಲ್ಲಿ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ ೨೦೦೩-೦೪ನೇ ಸಾಲಿನ 7ನೇ ತರಗತಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯನಿಗೆ ಅವಕಾಶಗಳು ದೊರೆತಾಗ ಸಕಾರಾತ್ಮಕ ಚಿಂತನ, ಮಂಥನಗಳೊಂದಿಗೆ, ಸದುಪಯೋಗ ಪಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾನೆ. ಪ್ರತಿಯೊಬ್ಬರೂ ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹೊಂದಬೇಕು. ದಶಕಗಳ ಹಿಂದೆ ಕಲಿತ ಶಾಲೆಯ ಋಣ ಮರೆಯದ ತಮಗೆ ಶಾಲೆಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಕಲಿತ ಶಾಲೆ, ತಂದೆ, ತಾಯಿ, ಜ್ಞಾನ ಮತ್ತು ಸ್ನೇಹ ಕೊಟ್ಟವರನ್ನು ಎಂದೂ ಮರೆಯಬಾರದು. ಅವರ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಈಗ ತಾವು ಮಾಡಿರುವ ಕಾರ್ಯಕ್ರಮದಿಂದ ಋಣ ತೀರಿಸದೇ ಹೋದರೂ ಉಪಕಾರ ಸ್ಮರಣೆ ಮಾಡಿದಂತೆ, ತಾವು ಓಲ್ಡ್ ಅಲ್ಲ ಗೋಲ್ಡ್ ಎಂದರು.ಅಧ್ಯಕ್ಷತೆ ವಹಿಸಿ ಶೇಖರ ಅಂಗಡಿ ಮಾತನಾಡಿ, ಇಂದಿನ ದಿನಗಳಲ್ಲಿ ಖಾಸಗಿ ಶಾಲೆ ನಡೆಸುವುದು ಬಹಳ ದುಸ್ತರವಾಗಿದೆ. ಇಂತಹ ಶಿಕ್ಷಕ, ಶಿಕ್ಷಕಿಯರು ಕಡಿಮೆ ವೇತನದಲ್ಲಿ ಶಾಲೆಗೆ ಸೇವೆ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಎರಡು ದಶಕಗಳ ಹಿಂದೆ ಕಲಿತ ಶಾಲೆ ಮರೆಯದೆ ಗುರುವಂದನೆ ಕಾರ್ಯಕ್ರಮ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದೀರಿ ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಶ್ರೀಶೈಲಪ್ಪ ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.ಶಾಲೆಯ ಹಳೆ ಶಿಕ್ಷಕಿಯರಾದ ಸುಜಾತಾ ಹೊಸಕೇರಿ, ರಾಜೇಶ್ವರಿ ಕುಳ್ಳೋಳ್ಳಿ, ಬಿಂದುಮನಿ ಶರ್ಮಾ, ಜಯಶ್ರೀ ಬಬಲಾದಿ, ಜ್ಯೋತಿ ಕುರಿ ಅನಿಸಿಕೆ ಹಂಚಿಕೊಂಡರು. ದೀಪಾ ಬಾಡನವರ, ಚೇತನ ಕುಂದರಗಿ, ರಾಜು ದಢೂತಿ ಹಳೆಯ ನೆನಪುಗಳ ಬುತ್ತಿ ಬಿಚ್ಚಿದರು. ಉಳಿದ ಹಲವರು ಹಾಡು, ನೃತ್ಯ ಮಾಡಿ ರಂಜಿಸಿದರು. ಶಾಲಾ ಮುಖ್ಯಶಿಕ್ಷಕಿ ಗೀತಾ ಪಾಟೀಲ ಮತ್ತು ಶಿಕ್ಷಕಿಯರಾದ ಸುವರ್ಣ ಕುಳ್ಳೋಳ್ಳಿ, ಶಿವಾನಂದ ಬಿಜ್ಜರಗಿ, ಅಶ್ವಿನಿ ಚಿಚಖಂಡಿ ಸ್ವಾಗತಿಸಿದರು. ಉಮಾ ಗುದಗಿ ಮತ್ತು ತೌಫಿಕ್ ಮಾಲಾಪೂರ ನಿರೂಪಿಸಿ, ವಂದಿಸಿದರು.