ಸಾರಾಂಶ
ಬಂಟಕಲ್ಲು ರೋಟರಿ ಸಭಾಭವನದಲ್ಲಿ ಜರುಗಿದ ಶಿರ್ವ ರೋಟರಿ ಆಟಿ ಕೂಟದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀರಾಮ್ ಪಿ.ಮರಾಠೆ ಮತ್ತು ಅವರ ಪತ್ನಿ ಡಾ.ಶ್ರುತಿ ಶ್ರೀರಾಮ್ ಮರಾಠೆ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಪು
ಪೊಲೆಂಡ್ ದೇಶದ ರಾಕ್ಲಾ ವಿಜ್ಞಾನ ಮತ್ತು ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ವಿಜ್ಞಾನಿಯಾಗಿ ಎರಡು ವರ್ಷದ ಶೈಕ್ಷಣಿಕ ಮತ್ತು ಸಂಶೋಧನಾತ್ಮಕ (ಪೋಸ್ಟ್ ಡಾಕ್ಟರಲ್) ಪದವಿ ಪಡೆದು ಭಾರತಕ್ಕೆ ವಾಪಾಸಾದ ನಿಟ್ಟೆ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀರಾಮ್ ಪಿ.ಮರಾಠೆ ಮತ್ತು ಅವರ ಪತ್ನಿ, ಇಂದನ ಪರಿವರ್ತನಾ ಇಂಜಿನಿಯರಿಂಗ್ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಪದವಿಗಳಿಸಿರುವ ಡಾ.ಶ್ರುತಿ ಶ್ರೀರಾಮ್ ಮರಾಠೆ ಅವರ ಸಾಧನೆಯನ್ನು ಗುರುತಿಸಿ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಜರುಗಿದ ಶಿರ್ವ ರೋಟರಿ ಆಟಿ ಕೂಟದಲ್ಲಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಮಾಜಿಕ ಸಂಘಟಕ ಮತ್ತು ಶಿರ್ವ ಸಿ.ಎ.ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ ವಿದೇಶದಲ್ಲಿ ದಂಪತಿಗಳಿಗೆ ಪೋಸ್ಟ್ ಡಾಕ್ಟರಲ್ ಪದವಿ ಸಾಧನೆಗೆ ಜೊತೆಯಾಗಿ ಅವಕಾಶ ಸಿಗುವುದು ಬಹಳ ವಿರಳ. ಇದು ಅವರ ಭವಿಷ್ಯದ ಅವಕಾಶಗಳಿಗೆ ಒಂದು ಮೈಲುಗಲ್ಲು ಆಗಿದೆ ಎಂದರು.ರೋಟರಿ ಜಿಲ್ಲಾ ವಲಯ 5ರ ಸಹಾಯಕ ಗವರ್ನರ್ ಡಾ.ವಿಘ್ನೇಶ್ ಶೆಣೈ ದಂಪತಿಗಳನ್ನು ಅಭಿನಂದಿಸಿ ಶುಭ ಕೋರಿದರು. ಕಾರ್ಯಕ್ರಮ ಸಂಯೋಜಕ ಹೆರಾಲ್ಡ್ ಕುಟಿನ್ಹೋ, ಪುಂಡಲೀಕ ಮರಾಠೆ ದಂಪತಿಗಳು ವೇದಿಕೆಯಲ್ಲಿದ್ದರು.
ಬೆಳ್ಮಣ್ ರೋಟರಿ ಪೂರ್ವಾಧ್ಯಕ್ಷ ಹಾಗೂ ವಲಯ 5ರ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೊ ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ವಿಲಿಯಮ್ ಮಚಾದೋ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜೆಸಿಂತಾ ಡಿಸೋಜಾ ನಿರೂಪಿಸಿದರು. ಅನೋಲಾ, ಜಾಕ್ಲಿನ್ ಮೆಂಡೋನ್ಸಾ ಪ್ರಾರ್ಥಿಸಿದರು. ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ಧನ್ಯವಾದವಿತ್ತರು. ಸೌಹಾರ್ದ ಆಟಗಳು, ಆಟಿ ತಿಂಗಳ ತಿಂಡಿತಿನಸುಗಳು ಗಮನಸೆಳೆದವು.