ಕನ್ನಡಪ್ರಭ ವಾರ್ತೆ ಮಳವಳ್ಳಿ

ಯಾವುದೇ ಷರತ್ತುಗಳು ಇಲ್ಲದೇ ಶಾಸಕ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಶೀಲಾ ಒತ್ತಾಯಿಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಯಾಗಬೇಕೆಂಬ ಪೋಷ್ಟರ್‌ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನು ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ತಳುಕು ಹಾಕಿರುವ ಷರತ್ತುಗಳನ್ನು ತೆಗೆದು ಹಾಕುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಬೇಕು ಎಂದು ಆಗ್ರಹಿಸಿದರು.

ಭಾರತೀಯ ಮಹಿಳೆಯರು ತಮ್ಮ ನ್ಯಾಯಸಮ್ಮತ ರಾಜಕೀಯ ಅವಕಾಶ ಮತ್ತು ಅಧಿಕಾರದಿಂದ ವಂಚಿತರಾಗಿದ್ದಾರೆ. 2026ರಲ್ಲಿ ಶಾಸನಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿಯನ್ನು 2029ರಿಂದ ಜಾರಿಗೊಳಿಸುವ ನೆಪದಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದರೂ ನಾರಿ ಶಕ್ತಿ ಎಂಬ ಸರ್ಕಾರದ ಘೋಷಣೆಯು ಕೇವಲ ಮಾತಿನ ಮಟ್ಟದಲ್ಲೇ ಉಳಿದುಕೊಂಡಿದೆ ಎಂದು ಕಿಡಿಕಾರಿದರು.

ಮಹಿಳಾ ಸಂಘಟನೆಗಳ ಹೋರಾಟದಿಂದಾಗಿ 2023ರಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬಂದಿತು. ಮುಂದಿನ ಚುನಾವಣೆಯಿಂದ ಜಾರಿಗೆ ಬರುವಂತೆ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಲು ಒತ್ತಾಯಿಸಿ ಜುಲೈ 21ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.


ಈ ವೇಳೆ ವಿವಿಧ ಸಂಘಟನೆ ಮುಖಂಡರಾದ ಪ್ರೇಮಾ, ಮಹದೇವಮ್ಮ, ಪ್ರಮೀಳಾ, ಸುಂದನಮ್ಮ, ಭಾಗ್ಯ ಪಾಲ್ಗೊಂಡಿದ್ದರು.

ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಗಿಡ ನೆಟ್ಟು ಸಂಭ್ರಮ

ಶ್ರೀರಂಗಪಟ್ಟಣಸರ್ಕಾರದ ಮಹತ್ವಾಕಾಂಕ್ಷಿಯ ಗೃಹ ಲಕ್ಷ್ಮಿ ಯೋಜನೆಗೆ ಇಂದಿಗೆ 3 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು. ತಾಲೂಕಿನ ನಗುವನಹಳ್ಳಿಯಲ್ಲಿ ತಾಪಂ ಇಒ ಚಂದ್ರು ನೇತೃತ್ವದಲ್ಲಿ ಸಮಿತಿ ಸದಸ್ಯರು ಗಿಡನೆಟ್ಟು ಸಂಭ್ರಮಾಚರಣೆ ಮಾಡಿದರು.

ನಂತರ ತಾಪಂ ಇಒ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ತಂಬಿದೆ. ಗ್ರಾಮದಲ್ಲಿ ಜನರ ಆಶಯದಂತೆ ಆಯ್ಕೆ ಮಾಡಿಕೊಂಡು ಸಸಿ ನೆಡುವ ಮೂಲಕ ಆಚರಣೆ ಮಾಡಲಾಗಿದೆ. ಅಲ್ಲದೇ, ಮಹಿಳೆಯರಿಗೆ ಸಿಹಿ ಹಂಚಿ ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸರ್ಕಾರದ ಇತರೆ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಸದಸ್ಯ ಅನ್ಸರ್, ತಾಲೂಕು ಸದಸ್ಯ ಸತೀಶ್, ಕುಮಾರ್, ದೇವರಾಜು, ನಾರಾಯಣಪ್ಪ, ಮಹೇಶ್, ಸಿಡಿಪಿಒ ಸಕಲೇಶ್ವರ್, ನಗುವನಹಳ್ಳಿ ಪಿಡಿಒ ಶಿಲ್ಪಾ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.