ಸಾರಾಂಶ
ಅಪ್ಪು ಪುತ್ಥಳಿಗೆ ಪೂಜೆ, ಮಾಡಿ ಹೂಮಳೆ ಗರೆದಿದ್ದಾರೆ. ಬಳಿಕ ಸಾರ್ವಜನಿಕರಿಗೆ ಸಸ್ಯಹಾರ ಹಾಗೂ ಮಾಂಸೀಹಾರ ಅನ್ನಸಂತರ್ಪಣೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ನಿಮಿತ್ತ ನಗರದಲ್ಲಿ ಭಾನುವಾರ ಪುನೀತ್ ರಾಜಕುಮಾರ ಅಭಿಮಾನಿಗಳು ಪುತ್ಥಳಿಗೆ ಬೆಳಗ್ಗೆಯಿಂದ ವಿಶೇಷ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.ರಾಜ್ಯಾದ್ಯಂತ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಪುನೀತ್ ಮೇಲೆ ಅಭಿಮಾನ ಮೆರೆಯುತ್ತಿದ್ದಾರೆ. ಆದರೆ ಹೊಸಪೇಟೆಯ ಅಭಿಮಾನಿಗಳು ವಿಶೇಷವಾಗಿ ಅಪ್ಪು ಪುತ್ಥಳಿಗೆ ಮಾಂಸಾಹಾರ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಪುತ್ಥಳಿಗೆ ಪೂಜೆ, ಮಾಡಿ ಹೂಮಳೆ ಗರೆದಿದ್ದಾರೆ. ಬಳಿಕ ಸಾರ್ವಜನಿಕರಿಗೆ ಸಸ್ಯಹಾರ ಹಾಗೂ ಮಾಂಸೀಹಾರ ಅನ್ನಸಂತರ್ಪಣೆ ಮಾಡಿದ್ದಾರೆ.
ನಗರದ ಡಾ. ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಪುನೀತ್ ರಾಜ್ಕುಮಾರ ೬.೬ ಅಡಿ ಎತ್ತರದ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪು ಪುತ್ಥಳಿ ಮುಂದೆ ಶಾಲಾ ಮಕ್ಕಳು ಡ್ಯಾನ್ಸ್ ಮಾಡಿ, ಅಪ್ಪುಗೆ ಗೌರವ ಸೂಚಿಸಿದರು.ಬಾರದ ಲೋಕಕ್ಕೆ ಹೋಗಿ ಎರಡು ವರ್ಷ ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಇಂದಿಗೂ ಕರಗಿಲ್ಲ. ಅಪ್ಪು ಇಲ್ಲವಲ್ಲ ಎಂಬ ನೋವನ್ನು ಆಗಾಗ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ.
ನಗರದಲ್ಲಿ ಪುನೀತ್ ಅಭಿಮಾನಿಗಳಾದ ಕಣ್ಣಿ ಶ್ರೀಕಂಠ, ಕಿಚಿಡಿ ವಿಶ್ವ, ಜೋಗಿ ತಾಯಪ್ಪ, ಈಶ್ವರ ಮತ್ತಿತರರು ಪುನೀತ್ ರಾಜಕುಮಾರಗೆ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಆಯೋಜಿಸಿದ್ದರು.