ಸಾರಾಂಶ
ನಗರದಲ್ಲಿ ಕನ್ನಡಸೇನೆಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ- ಕನಕ ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ನಾಡು ಹಾಗೂ ಭಾಷೆಯ ಪರಂಪರೆಗೆ ವಿಶಿಷ್ಟ ಹಿನ್ನೆಲೆಯಲ್ಲಿದೆ. ಕವಿ, ದಾಸರು ಸೇರಿದಂತೆ ಅನೇಕ ಮಹಾನೀಯರ ಶ್ರಮದಿಂದ ಕನ್ನಡ ಭಾಷೆ ಎಲ್ಲೆಡೆ ಪಸರಿಸಲು ಸಾಧ್ಯವಾಗಿದೆ ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಹೇಳಿದರು. ನಗರದ ಕೆಂಪನಹಳ್ಳಿ ಸಮೀಪ ಬೀರಲಿಂಗೇಶ್ವರ ಆಟೋ ನಿಲ್ದಾಣದಲ್ಲಿ ಕನ್ನಡಸೇನೆಯಿಂದ ಏರ್ಪ ಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಬುಧವಾರ ಮಾತನಾಡಿದರು. ಕೃತಿ, ವಚನಗಳ ಮೂಲಕ ಕವಿ ಸಂತರು ನಾಡಿನ ಪರಂಪರೆಯನ್ನು ಪುಸ್ತಕದಲ್ಲಿ ಪ್ರಕಟಿಸಿದ್ದು. ಇವುಗಳ ಅಭ್ಯಾಸಿಸದೇ ಇಂದಿನ ಯುವಪೀಳಿಗೆ ಕೇವಲ ಮೋಜುಮಸ್ತಿ ಜೀವನದಲ್ಲಿ ಪಯಣಿಸುತ್ತಿದೆ. ಇದರಿಂದ ಹೊರ ಬಂದು ನಾಡಿನ ಇತಿಹಾಸ ತಿಳಿಸುವ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಭಾಷೆಯ ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನು ಶ್ರಮವಹಿಸುವ ಅಗತ್ಯವಿದೆ. ಇತ್ತೀಚೆಗೆ ಬೆಂಗಳೂರಿನ ಮಹಾ ನಗರಗಳಲ್ಲಿ ಕನ್ನಡ ನಶಿಸುವ ಹಂತಕ್ಕೆ ತಲುಪಿದೆ. ಕನ್ನಡದಲ್ಲಿ ವ್ಯವಹರಿಸಿದರೆ ಅವಮಾನ ಎಂಬ ಮನೋಭಾವ ಮೂಡುತ್ತಿದೆ. ಅದಲ್ಲದೇ ಬೆಂಗಳೂರು ಪ್ರಥಮ ಬಾರಿ ತೆರಳುವವರು ಹೊರ ದೇಶದಲ್ಲಿದ್ದೇವೆ ಎಂಬ ಭಾವನೆ ಮೂಡುತ್ತದೆ ಎಂದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಆದೇಶ ದನ್ವಯ ಇಡೀ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಚಿಕ್ಕಮಗಳೂರಿನಲ್ಲೂ ಕನ್ನಡ ಸೇನೆ ವಿವಿಧ ಆಟೋ ಸಂಘಗಳ ಜೊತೆಗೂಡಿ ತಿಂಗಳಾತ್ಯದವರೆಗೂ ಕನ್ನಡ ಕಂಪನ್ನು ನಾಗರಿಕರಿಗೆ ಮುಟ್ಟಿಸುವ ಕರ್ತವ್ಯ ನಿಭಾಯಿಸುತ್ತಿದೆ ಎಂದು ಹೇಳಿದರು. ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರಾದ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ಅವಮಾನ ಎಂಬಂತೆ ಕೆಲವರು ಭಾವಿಸುತ್ತಿದ್ದಾರೆ. ಕನ್ನಡ ಎಂದರೆ ಸಾವಿರಾರು ವರ್ಷ ಗಳು ಹಿಂದೆ ನಮ್ಮ ಪೂರ್ವಿಕರು ಉಳಿಸಿ ಬೆಳೆಸಿದಂತಹ ಭಾಷೆ. ಇದನ್ನು ಹೊರತುಪಡಿಸಿ ಆಂಗ್ಲ ವ್ಯಾಮೋಹಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಬಳಿಕ ಆಶಾಕಿರಣ ಅಂಧಮಕ್ಕಳ ಶಾಲೆ ಮಕ್ಕಳಿಂದ ಕನ್ನಡ ಗೀತ ಗಾಯನ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಪತ್ರಕರ್ತರಾದ ಪಿ.ರಾಜೇಶ್, ಅನಿಲ್ ಆನಂದ್, ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಸತೀಶ್ಶೆಟ್ಟಿ, ವಕ್ತಾರ ಕಳವಾಸೆ ರವಿ, ಮುಖಂಡರಾದ ವಿನಯ್, ನಿಸಾರ್ ಅಹ್ಮದ್, ಶಾಹೀದ್, ಸತೀಶ್, ಲಕ್ಷ್ಮಣ್, ಹರೀಶ್, ಅಶೋಕ್, ಟೋನಿ, ಹೇಮಂತ್, ನವೀನ್, ಪ್ರವೀಣ್ ಉಪಸ್ಥಿತರಿದ್ದರು.
29 ಕೆಸಿಕೆಎಂ 3ಚಿಕ್ಕಮಗಳೂರಿನ ಕೆಂಪನಹಳ್ಳಿ ಸಮೀಪ ಬೀರಲಿಂಗೇಶ್ವರ ಆಟೋ ನಿಲ್ದಾಣದಲ್ಲಿ ಕನ್ನಡಸೇನೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮ ನಡೆಯಿತು.