ಸಾರಾಂಶ
ಡಿಎಆರ್ ವ್ಯಾನ್ನಲ್ಲಿ ಮಲಗಿಸಿಕೊಂಡು ಕರೆ ತಂದ ಎಸ್ಐಟಿ ಸ್ಥಳ ಮಹಜರ್ ಮಾಡಿದೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ(ಹಾಸನ)
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ನನ್ನು ಎಸ್ಐಟಿ ಅಧಿಕಾರಿಗಳ ತಂಡ ಇದೇ ಮೊದಲ ಬಾರಿಗೆ ಸ್ಥಳ ಮಹಜರು ಸಲುವಾಗಿ ಶನಿವಾರ ಹೊಳೆನರಸೀಪುರದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಕರೆ ತಂದರು.ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಏ.28 ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೇ 13 ಹಾಗೂ ಮೇ 28 ರಂದು ಎಸ್ಐಟಿ ಅಧಿಕಾರಿಗಳ ತಂಡ ಸಂತ್ರಸ್ತ ಮಹಿಳೆಯೊಂದಿಗೆ ರೇವಣ್ಣ ಮನೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದರುು. ಆದರೆ ಮುಖ್ಯ ಆರೋಪಿ ಪ್ರಜ್ವಲ್ ಲೋಕಸಭಾ ಚುನಾವಣೆ ನಂತರ ವಿದೇಶಕ್ಕೆ ಪಲಾಯನ ಮಾಡಿದ್ದ ಹಿನ್ನೆಲೆಯಲ್ಲಿ ತನಿಖೆಗೆ ಹಿನ್ನಡೆಯಾಗಿತ್ತು.
ಮೇ 30 ರಂದು ಪ್ರಜ್ವಲ್ ವಿದೇಶದಿಂದ ವಾಪಸಾಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಆತನನ್ನು ಬಂಧಿಸಿದ್ದು, ಆ ಬಳಿಕ ತನಿಖೆ ಚುರುಕುಗೊಂಡಿತ್ತು. ಏ.27ರಂದು ಮನೆ ಬಿಟ್ಟಿದ್ದ ಪ್ರಜ್ವಲ್ ತನಿಖೆ ಹಿನ್ನೆಲೆಯಲ್ಲಿ ಇದೀಗ ಮತ್ತೆ ಹೊಳೆನರಸೀಪುರಕ್ಕೆ ಆಗಮಿಸಿದ್ದಾರೆ.ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಆಗಮಿಸಿದ ಎಸ್ಐಟಿ ಅಧಿಕಾರಿಗಳು ಮೀಸಲು ಪೊಲೀಸ್ ಪಡೆ ವಾಹನದಲ್ಲಿ ಪ್ರಜ್ವಲ್ರನ್ನು ಕರೆ ತಂದರು. ಜತೆಗೆ ಎಫ್ಎಸ್ಎಲ್ ಅಧಿಕಾರಿಗಳು ಇದ್ದರು. ರಹಸ್ಯವಾಗಿ ಕರೆತಂದ ಎಸ್ಐಟಿ:
ಪ್ರಜ್ವಲ್ನನ್ನು ಎಸ್ಐಟಿ ಇದೇ ಮೊದಲ ಬಾರಿಗೆ ಸ್ಥಳ ಮಹಜರ್ಗಾಗಿ ಹೊಳೆನರಸೀಪುರಕ್ಕೆ ಕರೆ ತಂದಿತ್ತು. ಆದರೆ ಈ ವೇಳೆ ಬೆಂಬಲಿಗರು, ವಿರೋಧಿಗಳು ಗುಂಪು ಸೇರಿ ಗದ್ದಲ ಆಗಬಹುದು ಎನ್ನುವ ಕಾರಣಕ್ಕೆ ರಹಸ್ಯವಾಗಿ ಪೊಲೀಸ್ ವ್ಯಾನಿನಲ್ಲಿ ಮಲಗಿಸಿಕೊಂಡು ಕರೆ ತರಲಾಯಿತು.