ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆರ್‌ಟಿಒ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಮತ್ತು ಮಲ್ಲಿಕಾರ್ಜುನ್ ಅಭಿಮಾನಿ ಸಂಘದಿಂದ ಮೇ 20ರಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆ, ನಗೆಹಬ್ಬವನ್ನು ಆಯೋಜಿಸಲಾಗಿದೆ ಎಂದು ಮೈಸೂರಿನ ಅನಘ ಆಸ್ಪತ್ರೆ ತಜ್ಞ ವೈದ್ಯ ಡಾ.ಮಹೇಶ್ ತಿಳಿಸಿದರು.

ಪಟ್ಟಣದ ಮಲ್ಲಿಕಾರ್ಜುನ ಚಾರಿಟಬಲ್ ಕಚೇರಿಯಲ್ಲಿ ಮಾತನಾಡಿದ ಅವರು, ಆರ್‌ಟಿಒ ಮಲ್ಲಿಕಾರ್ಜುನ್ ಅವರ ಆಶಯದಂತೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಅರೋಗ್ಯ ಶಿಬಿರ ಆಯೋಜಿಸಿದೆ ಎಂದರು.

ಆರೋಗ್ಯ ಶಿಬಿರದಲ್ಲಿ ರಾಜ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮಲ್ಟಿ ಸ್ಪೆಷಲ್ ಆಸ್ಪತ್ರೆಯ 120ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಿ ವಿವಿಧ ರೋಗಗಳಿಗೆ 5 ಸಾವಿರ ರು. ವರೆಗಿನ ವೆಚ್ಚದ ತಪಾಸಣೆಗಳನ್ನು ಸ್ಥಳದಲ್ಲಿಯೇ ಮಾಡಲಾಗುವುದು. ಮೈಸೂರಿನ ಮೌರ್ಯ, ಕೆ.ಆರ್.ನಗರದ ವಿಸ್ಮಯ ಆಸ್ಪತ್ರೆ, ಪಟ್ಟಣದ ನ್ಯೂ ಅಪೂರ್ವ ಆಸ್ಪತ್ರೆ ಸೇರಿದಂತೆ ಹಲವು ಪ್ರಸಿದ್ಧ ಆಸ್ಪತ್ರೆಗಳ ನುರಿತ ವೈದ್ಯರು ಇರಲಿದ್ದಾರೆ ಎಂದರು.

ಗ್ರಾಮೀಣ ರಂಗ ಕಲೆಗಳನ್ನು ಉತ್ತೇಜಿಸಲು ಟ್ರಸ್ಟ್‌ನಿಂದ ಮೇ 19ರಂದು ಸಂಜೆ ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆ ಆಯೋಜಿಸಿದ್ದು, ಭಾಗವಹಿಸುವ ಪ್ರತಿಯೊಂದು ತಂಡಕ್ಕೂ 5000 ಸಾವಿರ ರು. ಗೌರವ ಧನ, ಜೊತೆಗೆ ಉತ್ತಮ ಪ್ರದರ್ಶನ ನೀಡುವ ಮೂರು ತಂಡಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಆಸಕ್ತ ಕಲಾ ತಂಡಗಳು ಟ್ರಸ್ಟ್ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದರು.


ಮೇ 20ರ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯಸಾನಿಧ್ಯವನ್ನು ತುಮಕೂರಿನ ಸಿದ್ಧಗಂಗೆ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ವಿವಿಧ ಧಾರ್ಮಿಕ ಮಠಗಳ ಶ್ರೀಗಳು ಹಾಗೂ ಗಣ್ಯರು ಭಾಗವಹಿಸುವರು. ಬಿಗ್ ಬಾಸ್ ವಿನ್ನರ್ ಗಿಲ್ಲಿನಟ ಹಾಗೂ ಕಾವ್ಯಶೈವ ಕಾರ್ಯಕ್ರಮಕ್ಕೆ ಮರೆಗು ನೀಡಲಿದ್ದಾರೆ. ಗಂಗಾವತಿ ಪ್ರಾಣೇಶ್ ತಂಡದಿಂದ ನಗೆ ಹಬ್ಬ ನಡೆಯಲಿದೆ ಎಂದರು.

ಈ ವೇಳೆ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಡಾ.ಜೆ.ಜೆ.ಆನಂದ್, ಡಾ.ಮಹೇಶ್, ಡಾ.ನಿರೂಪ್‌ರಾಜ್, ಮೌರ್ಯ ಆಸ್ಪತ್ರೆ ನಿರ್ದೇಶಕ ವೈ.ಕೆ.ಮಂಜುನಾಥ್, ವಿ.ಎಸ್.ಮಂಜುನಾಥ್, ಆರ್.ಮಂಜುನಾಥ್, ಅವಿನಾಶ್, ಶಿಕ್ಷಕ ರಂಗಸ್ವಾಮಿ, ನಿವೃತ್ತ ಉಪನ್ಯಾಸಕ ಕೆ.ಕಾಳೇಗೌಡ, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಟಿ.ವೈ.ಆನಂದ್, ಅಖಿಲ ಭಾರತ ಲಿಂಗಾಯತ ಮಹಾ ಸಭಾ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಆರ್‌ಟಿಒ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್ ಸೇರಿದಂತೆ ಹಲವರಿದ್ದರು.