ಸಾರಾಂಶ
ಅರಸೀಕೆರೆ: ನಗರದಲ್ಲಿ ಇಂದು ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಭಾಂದವರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ನಗರದ ಹಲವಾರು ಮಸೀದಿಗಳಲ್ಲಿ ಬೆಳಗಿನ ಮುಂಜಾನೆ ಪ್ರಾರ್ಥನೆ ಸಹ ಸಲ್ಲಿಸಲಾಗಿತ್ತು. ನಂತರ ನಗರದ ಹುಳಿಯಾರ್ ರಸ್ತೆಯಲ್ಲಿರುವ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಮುಸ್ಲಿಂ ಬಾಂಧವರು ಮೆರವಣಿಗೆಯ ಮೂಲಕ ಪ್ರಮುಖ್ಯ ರಸ್ತೆಗಳಲ್ಲಿ ಸಾಗಿ ಬಿ ಎಚ್ ರಸ್ತೆ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ನಜರ್ ಆಲಂ ಸಲಾಮಿ ಇವರ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ನಂತರ ಧರ್ಮಗುರುಗಳು ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಎಲ್ಲಾ ಮಸೀದಿಯ ಧರ್ಮಗುರುಗಳು ಸುನ್ನಿ ಜಾಮಿಯಾ ಮಸೀದಿಯ ಅಧ್ಯಕ್ಷರು ಕಾರ್ಯದರ್ಶಿ, ಸದಸ್ಯರು, ನಗರಸಭೆ ಸದಸ್ಯರು, ಮುಸ್ಲಿಂ ಮುಖಂಡರು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.