ಮಡಿಕೆ ಹೊತ್ತ ಮಹಿಳೆ ಮಳೆರಾಯ ಪದ ಹಾಡುತ್ತಾ ಮನೆ-ಮನೆ ಹೋದಾಗ ಮನೆಯವರು ಬಿಂದಿಗೆ ನೀರನ್ನು ಹಾಕುವುದು ವಾಡಿಕೆ
ಕನಕಗಿರಿ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಸುಮಂಗಲೆಯರಿಂದ ಗುರ್ಜಿ ಪೂಜೆ ಕಾರ್ಯಕ್ರಮ ಸೋಮವಾರ ನಡೆಯಿತು.
ಅವರೆ ಹೂ, ದಾಸವಾಳದ ಜತೆ ಕಪ್ಪೆಇರುವ ಮಣ್ಣಿನ ಮಡಿಕೆಯೊಂದನ್ನು ತಲೆಯ ಮೇಲೆ ಹೊತ್ತು ಮಳೆರಾಯನ ಪದ ಹಾಡುತ್ತಾ ಗ್ರಾಮಸ್ಥರ ಮನೆ ಮನೆಗಳಿಗೆ ದವಸ, ಧಾನ್ಯ ಸಂಗ್ರಹಿಸಲಾಯಿತು.ಹೀಗೆ ಸಂಗ್ರಹಗೊಂಡಿದ್ದ ದವಸ, ಧಾನ್ಯ ಗ್ರಾಮದ ದೇವಾನು ದೇವತೆಗಳಿಗೆ ಸಮರ್ಪಣೆ ಮಾಡಿ ಮಳೆಗಾಗಿ ಪ್ರಾರ್ಥಿಸಿಕೊಂಡರು. ದೇವರ ಪೂಜೆ ಬಳಿಕ ಗ್ರಾಮದ ಅಗಸಿಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಸಾಮೂಹಿಕ ಭೋಜನ ಸವಿದರು.
ಮಡಿಕೆ ಹೊತ್ತ ಮಹಿಳೆ ಮಳೆರಾಯ ಪದ ಹಾಡುತ್ತಾ ಮನೆ-ಮನೆ ಹೋದಾಗ ಮನೆಯವರು ಬಿಂದಿಗೆ ನೀರನ್ನು ಹಾಕುವುದು ವಾಡಿಕೆ. ಈ ಬಿಂದಿಗೆ ನೀರು ಮಡಿಕೆಯ ಮಡಿಯಿಂದಲೇ ಮಳೆ ಬರುತ್ತದೆ ಎನ್ನುವ ನಂಬಿಕೆಯಿಂದ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಅಂದು ಮಳೆಗಾಲದಲ್ಲಿ ಸಕಾಲಕ್ಕೆ ಮಳೆಯಾಗದಿದ್ದರೆ ಈ ಪೂಜಾ ಕಾರ್ಯಕ್ರಮ ಕೈಗೊಳ್ಳುತ್ತಿದ್ದರು. ಇದೀಗ ಮುಂಗಾರು ಮಳೆ ಬಾರದೆ ಇರುವುದರಿಂದ ಬೆನಕನಾಳ ಗ್ರಾಮದ ಮಹಿಳೆಯರು ಕೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಗ್ರಾಮಕ್ಕೆ ಒಳಿತಾಗಲಿದೆ ಎಂದು ಗ್ರಾಮದ ಯಲ್ಲಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.ಈ ವೇಳೆ ಶಿವಮ್ಮ ಉಪ್ಪಾರ, ಅಯ್ಯಮ್ಮ ಗೌಡ್ರಮ, ಶಿವಮ್ಮ ಕಲಿಕೇರಿ, ಗೌರಮ್ಮ, ಕವಿತಾ, ಬಸಮ್ಮ, ಅಮರಮ್ಮ, ಶಾಂತಮ್ಮ ಎಮ್ಮಿಗುಡ್ಡ, ಸತ್ಯಮ್ಮ ಸೇರಿದಂತೆ ಇತರರಿದ್ದರು.