ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಬೆಟ್ಟದಹಳ್ಳಿಯ ಗವಿಮಠದಲ್ಲಿ ಗವಿಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮಿಗಳ ಸುವರ್ಣ ಮಹೋತ್ಸವ ಹಾಗೂ ಶ್ರೀ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ಪೂರ್ವ ಭಾವಿ ಸಭೆ ನಡೆಯಿತು.ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು, ಶ್ರೀಕ್ಷೇತ್ರದ ಗವಿಮಠವು ಸುಮಾರು 500 ವರ್ಷಗಳ ಇತಿಹಾಸ ಹೊಂದಿದ್ದು ಇಲ್ಲಿ ಅನೇಕ ಪೂಜ್ಯರು ಶಿವಯೋಗಿಗಳು ,ಶಿವಶರಣರು ಸಾಧು ಸಂತರು ಶ್ರೀ ಕ್ಷೇತ್ರವನ್ನು ಪಾವನಗೊಳಿಸಿದ್ದಾರೆ.ಶ್ರೀ ಚಂದ್ರಶೇಖರಸ್ವಾಮಿಗಳು 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀಮಠದಲ್ಲಿ ಸುಸಜ್ಜಿತ ದಾಸೋಹ ಭವನ ಹಾಗೂ ಶ್ರೀ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಕಾರ್ಯವನ್ನು ನಾವೆಲ್ಲರೂ ಸಹ ಸಹಕಾರ ನೀಡಬೇಕು ಇದಕ್ಕೆ ಗ್ರಾಮಸ್ಥರು ಭಕ್ತರು ಎಲ್ಲರು ಸಹ ಸಹಕಾರ ನೀಡುವ ಕೆಲಸವನ್ನು ಮಾಡಬೇಕು. ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಅದ್ಧೂರಿಯಿಂದ ಮಾಡೋಣ ಎಂದು ಸಲಹೆ ನೀಡಿದರು. ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮಿಗಳು ಮಾತನಾಡಿ ಬೆಟ್ಟದಹಳ್ಳಿ ಶ್ರೀಗಳು ಗವಿಮಠಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಗವಿಮಠದಿಂದ ಶ್ರೀ ಮಲ್ಲಿಕಾರ್ಜುನ ವಿದ್ಯಾಸಂಸ್ಥೆ ತೆರೆದು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಧಾರ್ಮಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಕೆಲಸ ಮಾಡುತ್ತ ಬಂದಿದ್ದು ಈಗ ಶ್ರೀಗಳಿಗೆ ಸುವರ್ಣ ಮಹೋತ್ಸವ ಅಚರಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಎಲ್ಲ ಭಕ್ತರು ಗ್ರಾಮಸ್ಥರು ಶ್ರೀಗಳ ಸುವರ್ಷ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲರು ಸಹ ಸಹಕರಿಸಬೇಕು ಎಂದು ತಿಳಿಸಿದರು. ಬೆಟ್ಟದಹಳ್ಳಿ ಶ್ರೀಗಳು ಶ್ರೀ ಮಠಕ್ಕೆ ಸುಧೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ ಅವರ ಜಾಗಕ್ಕೆ ಉತ್ತರಧಿಕಾರಿ ನೇಮಕ ಮಾಡುವುದು ಕಷ್ಟ. ಅದನ್ನ ಶ್ರೀಗಳೇ ನೇಮಕ ಮಾಡಬೇಕು.ಅದಕ್ಕೆ ನಾವೆಲ್ಲರೂ ಬದ್ದರಾಗುತ್ತೇವೆ ಎಂದು ತಿಳಿಸಿದರು.ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿಗಳು ಮಾತನಾಡಿ ಗವಿಮಠಕ್ಕೆ ಪೀಠಾಧ್ಯಕ್ಷರಾಗಿ ಇಲ್ಲಿಗೆ 50ವರ್ಷಗಳು ತುಂಬುತ್ತ ಬಂದಿದ್ದು ಈಗ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ಕೆಲಸ ಮಠಾಧೀಶರ ಮೇಲಿದೆ ಜತೆಗೆ ದಾಸೋಹ ಭವನ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳುವ ಜವಾಬ್ದಾರಿಯಿದೆ ಎಂದರು.ಸಭೆಯಲ್ಲಿ ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶೀಕೇಂದ್ರ ಸ್ವಾಮಿಗಳು , ತೇವಡೆಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವಸ್ವಾಮಿಗಳು ಹಾಗೂ ಮಠಾಧೀಶರು ಹಾಗೂ ಮಲ್ಲಿಕಾರ್ಜುನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಿರಂಜನಮೂರ್ತಿ ,ಖಜಾಂಚಿ ನಂಜುಂಡಪ್ಪ ಹಾಗೂ ಶ್ರೀಮಠದ ಸಿಬ್ಬಂದಿಗಳು ಹಾಜರಿದ್ದರು.