ನಗರಸಭೆಯ 31 ವಾರ್ಡುಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಪ್ರತಿಯೊಂದು ವಾರ್ಡಿನಲ್ಲೂ ಹಲವರು ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿದ್ದು, ಕೆಲವರು ಪಕ್ಷದ ಬಿ–ಫಾರ್ಮ್ ಸಿಗದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ನಗರಸಭೆಯ ಅವಧಿ ಮುಗಿಯುವ ಕುರಿತು ವಿವಾದ ಸೃಷ್ಟಿಯಾಗಿರುವ ಮಧ್ಯೆ, ನಿಕಟ ಪೂರ್ವ ಅಧ್ಯಕ್ಷ ಎಂ. ಸಮೀವುಲ್ಲಾ ತಮ್ಮ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರವು ಮತ್ತೆ ಚುನಾವಣಾ ಕಣಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಮತದಾರರು ಇದೀಗ ಹೊಸ ನಾಯಕತ್ವದ ಹುಡುಕಾಟದಲ್ಲಿ ತೊಡಗಿದ್ದಾರೆ, ಸ್ಪರ್ಧೆಗೆ ಮುಗಿಬಿದ್ದ ಅಭ್ಯರ್ಥಿಗಳು ತಮ್ಮ ಮತಬ್ಯಾಂಕ್ ಬಲಪಡಿಸಲು ತೀವ್ರ ಚಟುವಟಿಕೆಯಲ್ಲಿ ತೊಡಗಿದ್ದಾರೆ.ನಗರಸಭೆಯ 31 ವಾರ್ಡುಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಪ್ರತಿಯೊಂದು ವಾರ್ಡಿನಲ್ಲೂ ಹಲವರು ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿದ್ದು, ಕೆಲವರು ಪಕ್ಷದ ಬಿ–ಫಾರ್ಮ್ ಸಿಗದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ನಗರಸಭೆಯ ಅವಧಿ ಮುಗಿಯುವ ಕುರಿತು ವಿವಾದ ಸೃಷ್ಟಿಯಾಗಿರುವ ಮಧ್ಯೆ, ನಿಕಟ ಪೂರ್ವ ಅಧ್ಯಕ್ಷ ಎಂ. ಸಮೀವುಲ್ಲಾ ತಮ್ಮ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವರ ಮನವಿಗೆ ಅನುಗುಣವಾಗಿ ನ್ಯಾಯಾಲಯ ತೀರ್ಪು ನೀಡುತ್ತದೆಯೋ ಅಥವಾ ಪೌರಾಡಳಿತ ಇಲಾಖೆಯ ನಿರ್ಣಯಕ್ಕೆ ಮನ್ನಣೆ ನೀಡುತ್ತದೆಯೋ ಎಂಬುದರ ಮೇಲೆ ನಗರದ ಮುಂದಿನ ರಾಜಕೀಯ ಸ್ಥಿತಿ ಅವಲಂಬಿತವಾಗಿದೆ.ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ವಕೀಲ ವಿವೇಕ್, ಚುನಾಯಿತ ಪ್ರತಿನಿಧಿಗಳ ಅವಧಿ ಮುಂದುವರಿಸಬೇಕೋ ಅಥವಾ ಹೊಸ ಚುನಾವಣೆ ಎದುರಿಸಬೇಕೋ ಎಂಬ ಪ್ರಶ್ನೆಗೆ ಹೈಕೋರ್ಟ್ ಸಮಗ್ರವಾಗಿ ವಿಚಾರಣೆ ನಡೆಸುತ್ತಿದೆ. ಅಂತಿಮ ತೀರ್ಪು ಬರುವವರೆಗೂ ಯಾವುದೇ ಊಹಾಪೋಹ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದರು.ತಮ್ಮ ಸೇವಾ ಅವಧಿ ಕಡಿತಗೊಂಡಿರುವುದನ್ನು ವಿರೋಧಿಸಿರುವ ಸಮೀವುಲ್ಲಾ, ಮತದಾರರು ನಮ್ಮನ್ನು ಆಶೀರ್ವದಿಸಿ ಅಧಿಕಾರ ನೀಡಿದ್ದರು. ಅವಧಿ ಪೂರ್ಣಗೊಳ್ಳುವ ಮೊದಲೇ ಅಧಿಕಾರ ಮುಕ್ತಾಯಗೊಳ್ಳುವುದು ಮತದಾನದ ಗೌರವಕ್ಕೆ ಧಕ್ಕೆಯಾಗಿದೆ. ಆದ್ದರಿಂದ ನ್ಯಾಯದ ಹಾದಿ ಹಿಡಿದು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ನ್ಯಾಯಾಲಯ ನ್ಯಾಯಯುತ ತೀರ್ಪು ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದರು.