೨ಎ ಮೀಸಲಾತಿ ಹೋರಾಟದ ರೂಪುರೇಷೆಗೆ ಸಿದ್ಧತೆ: ಕೂಡಲ ಶ್ರೀ

| Published : Jun 23 2025, 12:33 AM IST

೨ಎ ಮೀಸಲಾತಿ ಹೋರಾಟದ ರೂಪುರೇಷೆಗೆ ಸಿದ್ಧತೆ: ಕೂಡಲ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಹೋರಾಟಕ್ಕೆ ಮತ್ತೆ ಚುರುಕುಗೊಂಡಿದ್ದು, ಸೋಮವಾರ ಉಳವಿಯ ಚನ್ನಬಸವಣ್ಣನ ಕೇಂದ್ರದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮತ್ತೆ ಹೋರಾಟದ ರೂಪುರೇಷೆಗಳೊಂದಿಗೆ ಸಿದ್ಧತೆ ನಡೆಸಲಾಗುವುದೆಂದು ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಹೋರಾಟಕ್ಕೆ ಮತ್ತೆ ಚುರುಕುಗೊಂಡಿದ್ದು, ಸೋಮವಾರ ಉಳವಿಯ ಚನ್ನಬಸವಣ್ಣನ ಕೇಂದ್ರದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮತ್ತೆ ಹೋರಾಟದ ರೂಪುರೇಷೆಗಳೊಂದಿಗೆ ಸಿದ್ಧತೆ ನಡೆಸಲಾಗುವುದೆಂದು ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ರಾಮಪುರದ ಶ್ರೀದಾನೇಶ್ವರಿ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಾಠಿ, ಬೆದರಿಕೆಗೆ ನಾವು ಜಗ್ಗಲ್ಲ. ರಕ್ತ ಹರಿಸಿಯಾದರೂ ಈ ಬಾರಿ ರಾಜ್ಯದ ೨ಎ ಮೀಸಲಾತಿ ಪಡದೇ ತೀರುತ್ತೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೇಡಿಕೆಗೆ ಸರ್ಕಾರ ಸ್ಪಂದಿಸಲೇಬೇಕು. ಈಗಾಗಲೇ ಜಾತಿಗಣತಿಯಲ್ಲಿ ಕಡ್ಡಾಯವಾಗಿ ಪಂಚಮಸಾಲಿ ಎಂದೇ ಜಾತಿ ಕಾಲಂನಲ್ಲಿ ಬರೆಸಬೇಕೆಂದು ಸಮುದಾಯ ಬಾಂಧವರಿಗೆ ಮಾಹಿತಿ ನೀಡಿದರು.

ಗಳಿಸಿದ ಸಂಪತ್ತನ್ನು ಬಡಪ್ರತಿಭಾವಂತರಿಗೆ ದಾನ ಮಾಡಿದ್ದಲ್ಲಿ ಶ್ರೇಷ್ಠ ದಾನವಾಗಿದೆ. ಈ ದಾನ ಪ್ರತಿರೂಪವಾಗಿ ಮತ್ತೊಬ್ಬರಿಗೆ ದೊರಕುವುದು. ಪ್ರಸಕ್ತ ಉಪಯೋಗ ಪಡೆದಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಇಂತಹ ದಾನ ನಿರಂತರವಾಗಿ ಮುನ್ನಡೆದಲ್ಲಿ ಬಡತನ ಹಾಗೂ ಸಮಸ್ಯೆಗಳ ನಿವಾರಣೆಗೆ ಕಡಿವಾಣದೊಂದಿಗೆ ನೈಜ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಉತ್ತಮ ದೇಶ ನಿರ್ಮಿಸಲು ಸಾಧ್ಯವೆಂದರು.

ದೇವ, ಋಷಿ, ಪಿತೃ, ಮನುಷ್ಯ ಹಾಗೂ ಭೂತ ಋಣ ತೀರಿಸುವದು ಧಾರ್ಮಿಕ ಕರ್ತವ್ಯ ಇವುಗಳ ಪಾಲನೆ ಪ್ರತಿಯೊಬ್ಬರದ್ದಾಗಬೇಕು. ಪಂಚಮಸಾಲಿ ಕಾನೂನು ಸಮಿತಿ ರಚನೆಯಾಗಿದ್ದು, ಇದೀಗ ವ್ಯಾಪಾರಸ್ಥರ ಸಂಘವೂ ಸಹಿತ ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ ನೇತೃತ್ವದಲ್ಲಿ ಜಾರಿಯಾಗಿದ್ದು, ವ್ಯವಸಾಯದ ಜೊತೆಗೆ ವ್ಯವಹಾರವೂ ಸಮಾಜದಿಂದ ಉತ್ತೇಜನ ದೊರಕಬೇಕೆಂದು ಶ್ರೀಗಳು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಸನ್ಮಾನಗಳು ಸಾಧನೆಗಳಿಗೆ ಅಂತ್ಯವಲ್ಲ. ಬದಲಾಗಿ ಮುಂದಿನ ಜವಾಬ್ದಾರಿಯಾಗಿದೆ. ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರ ಮಾತ್ರ ಮುಖ್ಯವಾಗಿದ್ದು, ಮೌಲಾಧ್ಯಾರಿತ ಹಾಗೂ ಸಂಸ್ಕಾರದ ತಳಹದಿಯಲ್ಲಿ ಮಕ್ಕಳನ್ನು ಬೆಳೆಸುವ ಕಾರ್ಯವಾಗಬೇಕು. ರಾಜ್ಯದಲ್ಲಿ ೬ ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಕೇವಲ ೫.೫ ಲಕ್ಷ ಸರ್ಕಾರಿ ನೌಕರಿಯಲ್ಲಿದ್ದಾರೆ. ಎಲ್ಲರೂ ಸರ್ಕಾರಿ ನೌಕರಿಗೆ ಸೀಮಿತವಾಗದೆ ಸ್ವಯಂ ಉದ್ಯೋಗ, ಕೈಗಾರಿಕೆ, ವ್ಯಾಪಾರಕ್ಕೆ ಉತ್ತೇಜನ ನೀಡುವಂತಾಗಬೇಕೆಂದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಆರ್ಥಿಕ ಸಮಸ್ಯೆಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಅವರ ಹೆಚ್ಚಿನ ವ್ಯಾಸಾಂಗಕ್ಕೆ ಸಹಕರಿಸುವುದಾಗಿ ತಿಳಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ, ದುಶ್ಚಟಗಳಿಂದ ದೂರವಿದ್ದು, ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಇತರ ಸಮಾಜದೊಂದಿಗೆ ಪ್ರೀತಿಯಿಂದ ನಮ್ಮವರ ಅಭಿಮಾನದಿಂದ ಬೆಳೆಯಬೇಕೆಂದರು.

ಸಮುದಾಯ ಭವನ ನಿರ್ಮಾಣ: ರಬಕವಿ-ಬನಹಟ್ಟಿ ತಾಲೂಕಾ ಪಂಚಮಸಾಲಿ ಸಮುದಾಯ ಭವನಕ್ಕೆ ಸಭೆ ಕಾರಣವಾಯಿತು. ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಮಾದರಿ ಸಮುದಾಯ ಭವನ ನಿರ್ಮಾಣಕ್ಕೆ ಸಭೆ ತೀರ್ಮಾನಿಸಿತು.

ವಿದ್ಯಾಧರ ಸವದಿ, ಬಾಬಾಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ಡಿ.ಬಿ. ಜಾಯಗೊಂಡ, ಬಸವರಾಜ ಹಣಗಂಡಿ, ಸಿದ್ಧನಗೌಡ ಪಾಟೀಲ, ರವೀಂದ್ರ ಬಸಗೊಂಡನವರ, ಮಹಾದೇವ ಧೂಪದಾಳ ಸೇರಿದಂತೆ ಅನೇಕರಿದ್ದರು.