ನಾವು ದೇಶ ಕಟ್ಟುವಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ. ಕಷ್ಟ ಪಡದೇ ಇಷ್ಟ ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿ ಕಷ್ಟ ಪಟ್ಟು ಭವಿಷ್ಯ ಹಸನಾಗಿಸಿಕೊಳ್ಳಬೇಕು. ಕಳೆದ 5 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ಸಾಗುತ್ತದೆ
ಕನ್ನಡಪ್ರಭ ವಾರ್ತೆ ನಾಗಮಂಗಲ
ಪ್ರಸ್ತುತ ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಈ ಹೆಜ್ಜೆ ಭಾರತದ ಭರವಸೆ ಎಂದರೆ ತಪ್ಪಾಗಲಾರದು ಎಂದು ನೆಲಮಂಗಲ ದೇವಿಹಳ್ಳಿ ಟೋಟ್ನ ಹಾಸನ ಪ್ರಾಜೆಕ್ಟ್ ಡೈರೆಕ್ಟರ್ ಸೈಯ್ಯದ್ ಅಮಾನುಲ್ಲಾ ಅಭಿಪ್ರಾಯಪಟ್ಟರು.ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹರ್ಷ ಗ್ರ್ಯಾಂಡ್ ಹೋಟೆಲ್ನಲ್ಲಿ ಕ್ಯೂಬ್ ರೂಟ್ಸ್ ಫೌಂಡೇಷ್ನ ಕ್ಯೂಬ್ ಹೈವೇಸ್ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 22 ಮಂದಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಸಮಾರಂಭದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು ಕಾಣುತ್ತಿದೆ ಎಂದರೆ ಹೆಣ್ಣು ಮಕ್ಕಳು ಕಲಿಕೆಯಲ್ಲಿ ಹೆಚ್ಚು ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ ಎಂಬುದು ಸಾಬೀತಾಗುತ್ತಿದೆ. ನಾವು ನೀಡುತ್ತಿರುವ ವಿದ್ಯಾರ್ಥಿ ವೇತನ ಅವರ ಸಂಪೂರ್ಣ ಶಿಕ್ಷಣದ ಖರ್ಚನ್ನು ಭರಿಸದೇ ಇದ್ದರೂ ಅವರ ಶಿಕ್ಷಣದ ಖರ್ಚಿನ ಹೊರೆ ಕಡಿಮೆಯಾಗಿಸುತ್ತದೆ ಎಂದರು.ನಾವು ದೇಶ ಕಟ್ಟುವಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ. ಕಷ್ಟ ಪಡದೇ ಇಷ್ಟ ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿ ಕಷ್ಟ ಪಟ್ಟು ಭವಿಷ್ಯ ಹಸನಾಗಿಸಿಕೊಳ್ಳಬೇಕು. ಕಳೆದ 5 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ಸಾಗುತ್ತದೆ ಎಂದರು.
ನೆಲಮಂಗಲ ದೇವಿಹಳ್ಳಿ ಹೈವೆ ಪ್ರಾಜೆಕ್ಟ್ ಹೆಡ್ ನಾರಸಿಂಗ ಚೆಲ್ಲಾ ಮಾತನಾಡಿ, 8 ಗಂಟೆ ನಿರಂತರ ಓದು ನಿಮ್ಮದಾಗಲಿ. ನಿಮ್ಮ ಕಲಿಕೆ ಹೀಗೆ ಉತ್ತಮವಾಗಿ ಸಾಗಿ ನಿಮ್ಮ ಹೆಸರು ಪ್ರಜ್ವಲಿಸಲಿ. ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಂಡು ಬದುಕು ಉಜ್ವಲವಾಗಿಸಿಕೊಳ್ಳಿ ಎಂದರು.ಉಚಿತ ಕಂಪ್ಯೂಟರ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು. ಹಲವು ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದು ನೆಲ್ಲಿಗೆರೆ ಟೋಲ್ನ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ 22 ವಿದ್ಯಾರ್ಥಿಗಳಿಗೆ ತಲಾ 10ಸಾವಿರ ರು. ವಿದ್ಯಾರ್ಥಿ ವೇತನ ಹಾಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಶಿಕ್ಷಕ ಧರ್ಮೇಂದ್ರ ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ 75ರ ರೆಸಿಡೆಂಟ್ ಎಂಜಿನಿಯರ್ ಬಿಪಿನ್ ಬಿಹಾರಿ, ಸೀನಿಯರ್ ಮ್ಯಾನೇಜರ್ ಹರಿಬಾಬು, ಮ್ಯಾನೇಜರ್ ಚಂದ್ರಮೌಳಿ, ಕಾರಿಡಾರ್ ಅಂಡ್ ಸೇಫ್ಟಿ ಮ್ಯಾನೇಜರ್ ಜಯರಾಮೇಗೌಡ, ಟೋಲ್ ಮ್ಯಾನೇಜರ್ ನೇತಾಜಿ ಸೇರಿದಂತೆ ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು.