ಪ್ರಾಚ್ಯವಸ್ತು ಸಂರಕ್ಷಣೆ ನಮ್ಮ ಜವಾಬ್ದಾರಿ: ಬಸವರಾಜ ಓದಾನವರ

| Published : Sep 04 2025, 01:01 AM IST

ಸಾರಾಂಶ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಲಕ್ಷ್ಮೇಶ್ವರದ ಐತಿಹಾಸಿಕ ಶಂಖಬಸದಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬುಧವಾರ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಲಕ್ಷ್ಮೇಶ್ವರ: ಪ್ರಾಚ್ಯವಸ್ತುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಲಕ್ಷ್ಮೇಶ್ವರ ಪುರಸಭಾ ಸದಸ್ಯ ಬಸವರಾಜ ಓದಾನವರ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಲಕ್ಷ್ಮೇಶ್ವರದ ಐತಿಹಾಸಿಕ ಶಂಖಬಸದಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಕುಲಕ್ಕೆ ಪ್ರಾಚೀನ ಸ್ಮಾರಕಗಳೇ ರಾಯಭಾರಿಗಳು. ನಮ್ಮ ರಾಷ್ಟ್ರದ ಶ್ರೇಷ್ಠ ಶ್ರೀಮಂತ ಪರಂಪರೆಯನ್ನು ಪ್ರಾಚ್ಯ ಸ್ಮಾರಕಗಳು ಇಂದಿಗೂ ಪ್ರತಿಬಿಂಬಿಸುತ್ತಿವೆ ಎಂದು ಹೇಳಿದರು.

ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ ಯಲ್ಲವ್ವ ದುರಗಣ್ಣವರ ಮಾತನಾಡಿ, ನಮ್ಮ ಶ್ರೇಷ್ಠ ಪ್ರಾಚ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ. ಅದನ್ನು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳ ಮುಖಾಂತರ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ ಎಂದರು.

ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ್ ಮಾತನಾಡಿ, ನಾಲ್ಕು ಗೋಡೆಯ ಮಧ್ಯೆ ಶಿಕ್ಷಣ ಸೀಮಿತವಾಗಬಾರದು. ಜತೆಗೆ ಇಂತಹ ಪ್ರಾಚೀನ ಪರಂಪರೆ ಅರಿಯುವ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮಕ್ಕಳಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಬಿಆರ್‌ಪಿ ಈಶ್ವರ ಮೆಡ್ಲೇರಿ, ಪಟ್ಟಣದಲ್ಲಿ 6ನೇ ಶತಮಾನದಲ್ಲಿಯೇ ನಿರ್ಮಾಣವಾದ ಶಂಖಬಸದಿಯು ಪುಲಿಗೆರೆ ಸೋಮನಾಥ ದೇವಸ್ಥಾನದಂತೆಯೇ ಅತ್ಯಂತ ಹಳೆಯ ಇತಿಹಾಸ ಹೊಂದಿರುವಂಥದ್ದು ಎಂದರು.

ಶಂಖಬಸದಿ ಟ್ರಸ್ಟ್‌ನ ಕಾರ್ಯದರ್ಶಿ ಮಹಾವೀರಗೌಡ ಪಾಟೀಲ ಮಾತನಾಡಿದರು. ವಿಶ್ರಾಂತ ಶಿಕ್ಷಕ ಸಿ.ಜಿ. ಹಿರೇಮಠ, ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಎಂ. ಗುತ್ತಲ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಎ.ಎಂ. ಅಕ್ಕಿ, ವಾಸು ಪಾಟೀಲ ಇದ್ದರು.

ಪ್ರಾಚ್ಯ ಪ್ರಜ್ಞೆ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳಿಗಾಗಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ 23 ಪ್ರೌಢಶಾಲೆಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.

ಸ್ಪರ್ಧೆಯ ನಿರ್ಣಾಯಕರಾಗಿ ಸಿ.ಜಿ. ಹಿರೇಮಠ, ನಾಗರಾಜ ಮಜ್ಜಿಗುಡ್ಡ, ಸಿಆರ್‌ಪಿ ನವೀನ ಅಂಗಡಿ, ಗಿರೀಶ್ ನೇಕಾರ, ಸತೀಶ ಬೋಮಲೆ, ಉಮೇಶ ನೇಕಾರ, ಚಂದ್ರಶೇಖರ ವಡಕಣ್ಣವರ, ಎನ್.ಎನ್. ಸಾವಿರಕುರಿ, ಕೆ.ಪಿ. ಕಂಬಳಿ, ಜ್ಯೋತಿ ಗಾಯಕವಾಡ ಸ್ಪರ್ಧೆಗಳ ನಿರ್ಣಯಕರಾಗಿದ್ದರು.

ಸಿಆರ್‌ಪಿ ಕೆ.ಪಿ. ಕಂಬಳಿ ಪ್ರಾರ್ಥಿಸಿದರು. ಉಮೇಶ ನೇಕಾರ ಸ್ವಾಗತಿಸಿದರು. ಸತೀಶ ಬೋಮಲೆ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂಗಮೇಶ ಅಂಗಡಿ ವಂದಿಸಿದರು. ಶಂಖಬಸದಿ ಟ್ರಸ್ಟ್ ಕಮಿಟಿಯ ನಂದಕುಮಾರ ಪಾಟೀಲ, ಸುನೀಲಕುಮಾರ ಪಾಟೀಲ, ಪ್ರಕಾಶ ಪಾಟೀಲ ಹಾಗೂ ವಿವಿಧ ಪ್ರೌಢಶಾಲೆಗಳ ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.

ಸ್ಪರ್ಧೆಗಳ ಫಲಿತಾಂಶ: ಪ್ರಬಂಧ ಸ್ಪರ್ಧೆ: ಪ್ರಥಮ ಸ್ಥಾನ- ಮಹೇಶ ಏಳುಮಗ್ಗದ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೊಜನೂರ, ದ್ವಿತೀಯ ಸ್ಥಾನ- ಶ್ರದ್ಧಾ ಈರಡ್ಡಿ, ಸರ್ಕಾರಿ ಪ್ರೌಢಶಾಲೆ, ಮಾಡಳ್ಳಿ, ತೃತೀಯ ಸ್ಥಾನ- ಭಾಗ್ಯ ಮೇಟಿ ಎಸ್.ಜೆ.ಎಚ್.ಎಸ್. ಬನ್ನಿಕೊಪ್ಪ.

ಭಾಷಣ ಸ್ಪರ್ಧೆ: ಪ್ರಥಮ ಸ್ಥಾನ-ವೀಣಾ ವಡ್ಡರ, ಕೆ.ಪಿ.ಎಸ್. ಬೆಳ್ಳಟ್ಟಿ. ದ್ವಿತೀಯ ಸ್ಥಾನ-ಭಾಗ್ಯ ಮಾಳೆ ಎಂ.ಎಫ್. ಡಬಾಲಿ ಹೈಸ್ಕೂಲ್ ಶಿರಹಟ್ಟಿ, ತೃತೀಯ ಸ್ಥಾನ-ಹರ್ಷಿತಾ ಅಕ್ಕೂರ ಸರ್ಕಾರಿ ಪ್ರೌಢಶಾಲೆ, ಯಲ್ಲಾಪುರ.

ಚಿತ್ರಕಲೆ ಸ್ಪರ್ಧೆ: ಪ್ರಥಮ ಸ್ಥಾನ-ಉಮೇಶ ಪೂಜಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಒಡೆಯರ ಮಲ್ಲಾಪುರ, ದ್ವಿತೀಯ ಸ್ಥಾನ-ದಿವ್ಯಾ ಅಡರಕಟ್ಟಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಶಿರಹಟ್ಟಿ, ತೃತೀಯ ಸ್ಥಾನ-ಪವಿತ್ರಾ ಕಿತ್ತೂರ, ಸರ್ಕಾರಿ ಪ್ರೌಢಶಾಲೆ, ಮಾಡಳ್ಳಿ.

ರಸಪ್ರಶ್ನೆ ಸ್ಪರ್ಧೆ: ಪ್ರಥಮ ಸ್ಥಾನ-ನೀಲನಗೌಡ ಪಾಟೀಲ ಹಾಗೂ ವಿಕಾಸ ಮಜ್ಜಿಗುಡ್ಡ ಸರ್ಕಾರಿ ಪ್ರೌಢಶಾಲೆ, ಮಾಡಳ್ಳಿ, ದ್ವಿತೀಯ ಸ್ಥಾನ- ಕಾರ್ತಿಕ ದೇಸಾಯಿ ಹಾಗೂ ಭುವನರಾಜ ಈಳಿಗೇರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೊಜನೂರ. ತೃತೀಯ ಸ್ಥಾನ- ಬಸವರಾಜ ಶೆಟ್ಟಿಕೇರಿ ಹಾಗೂ ಭೀಮಪ್ಪ ಹಾದಿಮನಿ, ಸರ್ಕಾರಿ ಪ್ರೌಢಶಾಲೆ, ಮಜ್ಜೂರ.