ಸಂವಿಧಾನದ ಆಶಯ ಕಾಪಾಡಿ: ನ್ಯಾಯಾಧೀಶ ರವಿಕುಮಾರ

| Published : Jan 26 2024, 01:47 AM IST

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ನಮ್ಮ ಮತದಾನ ಮಾಡುವಾಗ ಯಾವುದೇ ಫಲಾಪೆಕ್ಷೆ ಇಲ್ಲದೇ ನಮ್ಮ ಹಕ್ಕು ಚಲಾಯಿಸಬೇಕು. ಯಾವುದೇ ಆಸೆ ಅಮಿಷಕ್ಕೆ ಒಳಗಾಗದೇ ಮತ ಚಲಾವಣೆ ಮಾಡಿದರೆ ನಮ್ಮ ಮತಕ್ಕೆ ಘನತೆ ಗೌರವ ಸಿಗಲಿದೆ ಎಂಬುದನ್ನು ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಚುನಾವಣೆ ಸಂದರ್ಭದಲ್ಲಿ ನಮ್ಮ ಮತದಾನ ಮಾಡುವಾಗ ಯಾವುದೇ ಫಲಾಪೆಕ್ಷೆ ಇಲ್ಲದೇ ನಮ್ಮ ಹಕ್ಕು ಚಲಾಯಿಸಬೇಕು. ಯಾವುದೇ ಆಸೆ ಅಮಿಷಕ್ಕೆ ಒಳಗಾಗದೇ ಮತ ಚಲಾವಣೆ ಮಾಡಿದರೆ ನಮ್ಮ ಮತಕ್ಕೆ ಘನತೆ ಗೌರವ ಸಿಗಲಿದೆ ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ಮತದ ಪಾವಿತ್ರತೆ ಕಾಪಾಡಿಕೊಳ್ಳಬೇಕೆಂದು ಚಿಂಚೋಳಿ ನ್ಯಾಯಲಯ ಪ್ರಧಾನ ಸಿವಿಲ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರವಿಕುಮಾರ.ವಿ.ಹೇಳಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕ ಆಡಳಿತ, ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತದಾನ ಹಕ್ಕು ಚಲಾಯಿಸಲು ಗುರುತಿನ ಚೀಟಿ ಮಹತ್ವ ಗೊತ್ತಾಗುತ್ತದೆ. ಸಮಾಜ ಸೇವೆ ಮಾಡಬೇಕಾದರೆ ಮತದಾನ ಮೂಲಕ ನೀಡುವುದೇ ಸಮಾಜ ಸೇವೆ ಆಗಲಿದೆ. ಮತದಾನ ಹಕ್ಕು ಬಂದ ತಕ್ಷಣ ನಮಗೆ ಘನತೆ ಗೌರವ ಬರುತ್ತದೆ. ಇಂದು ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿ ಯಾರೆಂಬುದು ಗೊತ್ತಿಲ್ಲದ ಸ್ಪರ್ಧಿಗಳು ನಮ್ಮ ಮತ ಖರೀದಿಸುತ್ತಿದ್ದಾರೆ. ನಾವೆಲ್ಲರೂ ಜಾಗೃತರಾಗಿ ಸಂವಿಧಾನದ ಆಶಯದಂತೆ ಮತದಾನ ಮಾಡಿದರೆ ದೇಶ ಅಭಿವೃದ್ದಿ ಆಗುತ್ತದೆ.ಮತದಾನ ಶೇ.೬೦ ಆಗುತ್ತಿದ್ದು ಶೇ.೧೦೦ ಆದರೆ ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಆಡಳಿತ ಕಾಣಬಹುದಾಗಿದೆ ಎಂದು ನ್ಯಾಯಾಧೀಶ ರವಿಕುಮಾರ.ವಿ ಅಭಿಪ್ರಾಯವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ, ವಕೀಲ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಮತದಾರರ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ನ್ಯಾಯವಾದಿಗಳಾದ ಜಗನ್ನಾಥ ಗಂಜಗಿರಿ, ಶರಣರೆಡ್ಡಿ ಪೋಂಗಾ, ಕಂದಾಯ ನಿರೀಕ್ಷಕ ರವಿಕುಮಾರ ಪಾಟೀಲ, ಚುನಾವಣಾ ಸಿಬ್ಬಂದಿ ಶೋಯಬ್ ಉಪನ್ಯಾಸಕರು, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.