ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಮ್ಮ ಗ್ರಾಮೀಣ ರೈತಾಪಿ ಜನರು ತಾವು ಭೂಮಿತಾಯಿಯನ್ನು ದೇವರಂತೆ ಬಗೆದು ಅದನ್ನು ವರ್ಷವಿಡಿ ಪೂಜಿಸುವ, ಆರಾಧಿಸುವ ಪರಂಪರೆ ಇದೆ. ಅಂತಹ ಹಬ್ಬ ಹರಿದಿನಗಳಲ್ಲಿ ಚರಗ ಚೆಲ್ಲುವ ವಿಶಿಷ್ಟ ಪರಂಪರೆಯೂ ಒಂದು. ಇಂತಹ ನೆಲ ಮೂಲ ಸಂಸ್ಕೃತಿ ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಡಾ.ವಿರೇಶ ಬಡಿಗೇರ ಹೇಳಿದರು.ಎಳ್ಳ ಅಮವಾಸ್ಯೆ ನಿಮಿತ್ತ ತಾಲೂಕಿನ ತೆಗ್ಗಿ ಗ್ರಾಮದ ಡಾ.ಚಂದ್ರಶೇಖರ ಕಾಳನ್ನವರ ಅವರ ಹೊಲದಲ್ಲಿ ಜರುಗಿದ ಚರಗ ಚೆಲ್ಲುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪರಂಪರೆಯನ್ನು ನಮ್ಮ ರೈತರು ಇಂದಿಗೂ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ಆಧುನಿಕತೆಯ ತೆಗ್ಗೆಗೆ ಸಿಲುಕಿದ ಮಾನವ ಹೊಸತನವನ್ನು ಬಿಡದೇ ಅದರ ಹಿಂದೆ ಬೆನ್ನುಹತ್ತಿ ಪ್ರಾಚೀನ ಪರಂಪರೆ ಮರೆಯುತ್ತಿದ್ದಾನೆ. ಆದರೆ, ಗ್ರಾಮೀಣ ಕಲೆಗಳು, ಹಬ್ಬ ಹರಿದಿನಗಳ ಪೂಜೆ, ಉತ್ಸವಗಳು, ಸಂಗೀತ, ನೆಲಮೂಲ ಸಂಸ್ಕೃತಿಯ ಸೊಗಡು ಇನ್ನು ಕಂಡು ಬರುತ್ತಿದೆ. ಅದನ್ನು ಹೊಸಪೀಳಿಗೆಗೆ ಹಸ್ತಾಂತರಿಸುವ ಮತ್ತು ಬೆಳೆಸಿಕೊಂಡು ಬರುವ ಇಂತಹ ಹಬ್ಬಗಳು ಉಳಿಯಬೇಕು ಎಂದರು. ತೋಟಗಾರಿಕೆ ವಿವಿಯ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ, ಗ್ರಾಮೀಣ ಪರಂಪರೆ ಉಳಿಸುವ ಕಾರ್ಯ ನಡೆಯಬೇಕಿದೆ. ಮನುಷ್ಯ ಇಂದಿನ ದಿನಗಳಲ್ಲಿ ಮೂಲ ಸಾಂಸ್ಕೃತಿಕ ಪರಂಪರೆ ಮರೆಯುತ್ತಿದ್ದಾನೆ. ಭೂಮಿ ತಾಯಿಯನ್ನು ಪ್ರೀತಿಸುವ, ಗ್ರಾಮೀಣ ಹಬ್ಬ ಹರಿದಿನಗಳನ್ನು ಆಚರಿಸುವುದಕ್ಕೆ ಸಮಯ ಕೊಡುತ್ತಿಲ್ಲ. ನಮ್ಮ ಗ್ರಾಮೀಣ ರೈತಾಪಿ ಜನರ ಈ ಹಬ್ಬ ಅತ್ಯಂತ ಖುಷಿದಾಯಕ ಹಾಗೂ ಭೂಮಿ ತಾಯಿಗೆ ಗೌರವಿಸುವ ವೈಜ್ಞಾನಿಕ ಹಿನ್ನೆಲೆ ಹೊಂದಿರುವ ಹಬ್ಬವಾಗಿದೆ ಎಂದರು. ಈ ಹಬ್ಬದಲ್ಲಿ ರೈತ ಕುಟುಂಬವು ನಾನಾ ತರದ ಸಿಹಿ ಅಡುಗೆ ಮಾಡಿ ತಂದು ಅದನ್ನು ಭೂಮಿತಾಯಿಯ ನಾಲ್ಕೂ ಮೂಲೆಗಳಿಗೂ ಚೆಲ್ಲಿದರು. ಪೈರುಗಳ ನಡುವೆ ಇರುವ ಬನ್ನಿ ಮರಕ್ಕೆ ಪೂಜೆ ಮಾಡಿದರು. ನಂತರ ಹೋಳದ ಹೊಲದಲ್ಲಿ 5 ಕಲ್ಲುಗಳನ್ನು ಸಾಲಾಗಿ ಇಟ್ಟು ಅವುಗಳಿಗೆ ಅರಿಶಿಣ, ಕುಂಕುಮ ಹಚ್ಚಿ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು. ಹೋಳಿಗೆ, ಮಾದಲಿ, ಸೆಂಗಾದ ಹೋಳಿಗೆ, ಕರ್ಚಿಕಾಯಿ, ಜೋಳದ, ಸಜ್ಜಿ ರೊಟ್ಟಿ, ಹಲವಾರು ತರದ ತರಕಾರಿ ಪಲ್ಯೆ ಉಣಬಡಿಸಿದರು. ಚರಗ ಚೆಲ್ಲುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ತಾಲೂಕು ಅಧ್ಯಕ್ಷ ಡಾ.ಎಚ್.ಎಸ್.ಘಂಟಿ, ಹಂಪಿ ಕನ್ನಡ ವಿವಿಯ ಮಾಹಿತಿ ಕೇಂದ್ರದ ನಿರ್ದೇಶಕಿ ಡಾ.ಮೀನಾಕ್ಷಿ, ಡಾ.ಅರುಣಕುಮಾರ ಗಾಳಿ, ಗಂಗಾಧರ ಮೋಕಾಶಿ, ವಿರೇಶ ಹಿರೇಮಠ, ಡಾ.ಸಂತೋಷ ಕಾಳನ್ನವರ್, ಪಾರ್ವತಿ ಕಾಳನ್ನವರ ಸೇರಿದಂತೆ ಇನ್ನೂ ಅನೇಕ ಸಾಹಿತಿಗಳು, ಕುಟುಂಬ ವರ್ಗದವರು ಇದ್ದರು.