ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಕೂನಿಕೆರೆ ಎಕೆ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು ಮದ್ಯ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮಹಿಳೆಯರು, ಗ್ರಾಮದಲ್ಲಿ ಮದ್ಯ ಮಾರಾಟ ತಾಂಡವವಾಡುತ್ತಿದೆ. ಈಗಾಗಲೇ ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ನಮ್ಮ ಗಂಡಂದಿರು ದುಡಿದ ಹಣದಲ್ಲಿ ಕಂಠಪೂರ್ತಿ ಕುಡಿದು ಹೊಡೆಯುವುದು, ಬಡಿಯುವುದು ಮಾಡುತ್ತಾರೆ. ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದರಿಂದ ನಮ್ಮ ಗಂಡಂದಿರು, ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವಕರು ಸಹ ಕುಡಿತಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಬಕಾರಿ ಅಧಿಕಾರಿಗಳು ಯಾವ ಊರಿಗೆ ದಾಳಿ ನಡೆಸಲು ಹೋದರೂ ಸಹ ಅಕ್ರಮ ಮದ್ಯದ ಅಂಗಡಿಗಳವರಿಗೆ ಮಾಹಿತಿ ನೀಡುವವರು ಇದ್ದಾರೆ ಎಂದರೆ ಎಲ್ಲಿ ಕಳ್ಳರು ಇದ್ದಾರೆ ಎಂದು ನೀವೇ ಊಹಿಸಿ. ಹಿಡಿಯುವುದು, ಅಕ್ರಮ ಮದ್ಯ ನಿಲ್ಲಿಸುವುದು ಒತ್ತಟ್ಟಿಗಿರಲಿ. ಹಳ್ಳಿಗಳಲ್ಲಿ ಮದ್ಯ ಮಾರುವವರಿಗೆ ಅಬಕಾರಿ ಅಧಿಕಾರಿಗಳ ಮೇಲೆ ಭಯವೇ ಇಲ್ಲದಂತಾಗಿದೆ. ಅಬಕಾರಿ ನಿರೀಕ್ಷಕರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.
ಮಹಿಳೆಯರ ಪ್ರತಿಭಟನೆಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು ಸಾಥ್ ನೀಡಿದರು.ಈ ಸಂದರ್ಭದಲ್ಲಿ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ರಾಘವೇಂದ್ರ, ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಗೋವಿಂದಪ್ಪ, ಕಣ್ಮೇಶ್, ಪುಷ್ಪಾವತಿ, ದ್ರಾಕ್ಷಾಯಿಣಿ, ಉಮಾದೇವಿ, ಜ್ಯೋತಿ, ಗಿರಿಜಮ್ಮ, ಲಕ್ಷ್ಮೀದೇವಿ, ಪುಟ್ಟಮ್ಮ, ಚಂದ್ರಕಲಾ, ರಂಗನಾಥ, ಹನುಮಂತಪ್ಪ, ಜಯಣ್ಣ ಮುಂತಾದವರು ಹಾಜರಿದ್ದರು.