ಸಾರಾಂಶ
ಎಚ್ಐವಿ ಸೊಂಕಿತರಿಂದ ರಕ್ತ ಪಡೆಯುವುದು, ಸಂಸ್ಕರಣೆ ಮಾಡದೇ ಸೂಜಿ, ಸಿರಿಂಜ್ ಬಳಕೆ ಮಾಡುವುದರಿಂದ ರೋಗ ಬರುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ನರ್ಸಿಂಗ್ ಅಧಿಕಾರಿ ಜಮೀರ್ ಅಲಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಶೇ.80ಕ್ಕಿಂತ ಹೆಚ್ಚು ಜನರಿಗೆ ಏಡ್ಸ್ ರೋಗ ಹರಡುತ್ತದೆ. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತಿ ದೊಡ್ಡ ಔಷಧಿಯಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ನರ್ಸಿಂಗ್ ಅಧಿಕಾರಿ ಜಮೀರ್ ಅಲಿ ಹೇಳಿದರು.ಸೈದಾಪುರ ಪಟ್ಟಣದ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಚ್ಐವಿ ಸೊಂಕಿತರಿಂದ ರಕ್ತ ಪಡೆಯುವುದು, ಸಂಸ್ಕರಣೆ ಮಾಡದೇ ಸೂಜಿ, ಸಿರಿಂಜ್ ಬಳಕೆ ಮಾಡುವುದರಿಂದ ರೋಗ ಬರುತ್ತದೆ ಎಂದರು. ರೈಲ್ವೆ ನಿಲ್ದಾಣದ ಸಲಹಾ ಸಮಿತಿ ಸದಸ್ಯ ಭೀಮಣ್ಣ ಮಡಿವಾಳಕರ್ ಮಾತನಾಡಿ, ಏಡ್ಸ್ ರೋಗ ಹರಡುವ ವಿಧಾನ, ಅದರ ದುಷ್ಪರಿಣಾಮಗಳ ಬಗ್ಗೆ ವಿವರಿಸುತ್ತಾ, ಯುವ ಜನತೆ ಸಂಯಮದಿಂದ ತಮ್ಮ ಶಕ್ತಿ ಸಾಮರ್ಥ್ಯ ಕಾಪಾಡಿಕೋಳ್ಳಬೇಕು ಎಂದರು.ಪ್ರಾಂಶುಪಾಲ ಪ್ರೊ.ಕಿಶನ್ ರಾಠೋಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಚ್ಐವಿ ಸೊಂಕಿತರ ಜನರಿಗೆ ಹಾಗೂ ಸಂಬಂಧಿಕರಿಗೆ ಧೈರ್ಯ, ಸಹಾಯ ಮತ್ತು ಬೆಂಬಲ ನೀಡುವ ಮನಸ್ಥಿತಿ ಬೆಳೆಸುವುದು ಬಹುದೊಡ್ಡ ಜವಾಬ್ಧಾರಿ ನಿಮ್ಮ ಮೇಲಿದೆ ಎಂದರು.
ಇದಕ್ಕೂ ಮುನ್ನ ಭಾಷಣ, ರಸಪ್ರಶ್ನೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಹೊನ್ನಪ್ಪ ಸಗರ, ಬನ್ನಪ್ಪ, ವೀರಮ್ಮ, ಶ್ವೇತಾ, ಮಂಜುನಾಥ, ಸಿಬ್ಬಂದಿ ಮಾರುತಿ, ಅಭಿ, ಗೀತಾ, ಸೀತಾಬಾಯಿ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.