ಬಸವಣ್ಣನವರ ತತ್ವ, ಆದರ್ಶ ಪಾಲನೆ ಅಗತ್ಯ: ರಾಜೇಶ್ ನಾಥ್ ಗುರೂಜಿ

| Published : Jun 18 2025, 12:12 AM IST

ಸಾರಾಂಶ

ವಿರಕ್ತ ಮಠಾಧೀಶ ಶ್ರೀ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿಗಳ ಜನ್ಮ ವರ್ಧಂತಿ ಕಾರ್ಯಕ್ರಮ ಮಠದ ಆವರಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ವಿರಕ್ತ ಮಠಾಧೀಶ ಶ್ರೀ ನಿಶ್ಚಲನಿರಂಜನ ದೇಶೀಕೇಂದ್ರ ಸ್ವಾಮೀಜಿಗಳ ಜನ್ಮ ವರ್ಧಂತಿ ಕಾರ್ಯಕ್ರಮ ಮಠದ ಆವರಣದಲ್ಲಿ ನಡೆಯಿತು.

ಈ ಸಂದರ್ಭ ಸಾನ್ನಿಧ್ಯ ವಹಿಸಿ ಮಾತನಾಡಿದ ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಪ್ರಧಾನಕಾರ್ಯದರ್ಶಿ ಅರಶಿನಕುಪ್ಪೆ ಸಿದ್ದಲಿಂಗಪುರ ಶ್ರೀ ಮಂಜುನಾಥ ಕ್ಷೇತ್ರದ ಪ್ರಧಾನ ಗುರು ಶ್ರೀ ರಾಜೇಶ್‌ನಾಥ್ ಜೀ, ಬಸವಣ್ಣನವರ ತತ್ವ, ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಮಠ ಮಾನ್ಯಗಳನ್ನು ಸ್ವಾಮೀಜಿಗಳು ಮುನ್ನಡೆಸುವಂತಾಗಬೇಕು ಎಂದು ಹೇಳಿದರು.

ಧರ್ಮ ಜಾಗೃತಿಯ ವಿಚಾರದಲ್ಲಿ ಸಾಧು ಸಂತರ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಲೋಕ ಕಲ್ಯಾಣಕ್ಕೆ ಸ್ವಾಮೀಜಿಗಳೂ ಸೇರಿದಂತೆ ಇಡೀ ಸಮುದಾಯ ಶ್ರಮಿಸಬೇಕು ಎಂದು ಅಭಿಪ್ರಾಯಿಸಿದರು.

ಸ್ವಾಮೀಜಿಗಳು, ಸಾಧು ಸಂತರು ಕೇವಲ ಒಂದು ವರ್ಗ, ಜಾತಿಗೆ ಮಾತ್ರ ಸೀಮಿತವಾಗಬಾರದು. ಧರ್ಮ ಜಾಗೃತಿ ಕಾರ್ಯದಲ್ಲಿ ಎಲ್ಲ ಸಮುದಾಯವನ್ನೂ ಒಂದುಗೂಡಿಸಿಕೊಳ್ಳಬೇಕು. ಮಹಾನ್ ದಾರ್ಶನಿಕರಾದ ಬಸವಣ್ಣನವರು ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದು, ಅವರನ್ನೂ ಸಹ ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಿಕೊಳ್ಳಬಾರದು ಎಂದರು.

ಮಠಮಾನ್ಯಗಳು ಸಮಾಜದ ಸುಧಾರಣೆಗೆ ಇರುವ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿರಕ್ತ ಮಠದಿಂದಲೂ ಸಮಾಜ ಸುಧಾರಣೆಯ ಕಾರ್ಯಗಳು ಆಗಲಿ. ಯುವ ಸ್ವಾಮೀಜಿಗಳು ಸಮಾಜಕ್ಕೆ ಶಕ್ತಿ ತುಂಬಿ, ಮಾರ್ಗದರ್ಶನ ನೀಡುವಂತಾಗಲಿ ಎಂದು ಆಶಿಸಿದರು.

ವಿರಕ್ತ ಮಠಾಧೀಶ ಶ್ರೀ ನಿಶ್ಚಲ ನಿರಂಜನ ದೇಶೀದೇಂದ್ರ ಸ್ವಾಮೀಜಿ ಮಾತನಾಡಿ, ಜನ್ಮ ವರ್ಧಂತಿಯಂದು ಭಕ್ತರು ಸಲ್ಲಿಸುವ ಗುರು ಭಕ್ತಿಯು ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡುತ್ತದೆ. ಮಠದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮಠದ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರವೂ ಮಹತ್ತರವಾಗಿದೆ ಎಂದರು.

ಈ ಸಂದರ್ಭ ಪಟ್ಟಣದ ವೀರಶೈವ ಸಮಾಜ ಅಧ್ಯಕ್ಷ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ವೀರಶೈವ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಯುವರಾಜ್, ಜೇಸೀ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್, ಕುಶಾಲನಗರದ ಉದ್ಯಮಿ ಸುಗುರಾಜ್, ಕೆ.ಎನ್. ತೇಜಸ್ವಿ, ಯೋಗೇಶ್, ಮುರುಳೀಧರ್, ವಿಜಯ ಹಾನಗಲ್, ಗಿರಿಧರ್, ಬಜೆಗುಂಡಿ ಮಣಿ, ಅಕ್ಕನ ಬಳಗದ ಗೀತಾ ರಾಜು, ಮಾಯಾ ಗಿರೀಶ್, ಅಭಿಷೇಕ್ ಸೇರಿದಂತೆ ಇತರರು ಇದ್ದರು.