ಸಾರಾಂಶ
ಆರೋಗ್ಯ, ಸುಖ, ಶಾಂತಿ, ಸಹೋದರತೆ, ಪ್ರೀತಿ, ವಿಶ್ವಾಸ, ಸಹನೆ, ಸಮೃದ್ಧಿ, ನೆಮ್ಮದಿ, ಹಸಿವು, ಬಡತನ ರಹಿತ ಜಗತ್ತು ನೋಡಲಿ.
ಕಂಪ್ಲಿ: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ತ್ಯಾಗ ಮತ್ತು ಬಲಿದಾನ ಸಂಕೇತ ಸಾರುವ ಬಕ್ರಿದ್ ಹಬ್ಬವನ್ನು ಸಂಭ್ರಮದಿಂದ ಸೋಮವಾರ ಆಚರಿಸಿದರು.
ಸರ್ವ ಮಾನವ ಕುಲ ಕೋಟ್ಯಂತರ ಜನರಿಗೆ ಆರೋಗ್ಯ, ಸುಖ, ಶಾಂತಿ, ಸಹೋದರತೆ, ಪ್ರೀತಿ, ವಿಶ್ವಾಸ, ಸಹನೆ, ಸಮೃದ್ಧಿ, ನೆಮ್ಮದಿ, ಹಸಿವು, ಬಡತನ ರಹಿತ ಜಗತ್ತು ನೋಡಲಿ. ಪ್ರವಾದಿಗಳ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಪಾಲಿಸಲಿ ಕರುಣಿಸಲಿ ಎಂದು ಪ್ರಾರ್ಥಿಸಿ ಮೌಲ್ವಿ ಹಾಜಿ ಜೀಯಾವುದ್ದೀನ್ ದುವಾ ಮಾಡಿದರು. ಬೆಳಿಗ್ಗೆ ಕುಟುಂಬದ ಸದಸ್ಯರೆಲ್ಲರೂ ಹೊಸ ಉಡುಪುಗಳನ್ನು ಧರಿಸಿ, ಮಹಿಳೆಯರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರೆ ಪುರುಷರು ಈದ್ಗಾ ಮೈದಾನದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರದ್ಧಾ ಭಕ್ತಿಯಿಂದವಿಶೇಷ ಪ್ರಾರ್ಥನೆ ಸಲ್ಲಿಸಿದರು.ಇಲ್ಲಿನ ಮುದ್ದಾಪುರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಧರ್ಮಗುರುಗಳು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಧರ್ಮಗುರುಗಳಾದ ಸೈಯದ ಷಾ ಅಬುಲ್ ಹಸನ ಖಾದ್ರಿ ಉರುಫ್ ಆಜಂ ಸಾಹೇಬ್ ಸಜ್ಜಾದೆ ನಶೀನ (ಪೀಠಾಧಿಪತಿ) ದಿವಾನಖಾನೆ ತ್ಯಾಗ ಬಲಿದಾನದ ಹಬ್ಬದ ಸಂದೇಶ ನೀಡಿ ಬಕ್ರಿದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು.
ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಒಳ್ಳೆತನವಾಗಿ ಬಾಳಿರಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ, ಮೌಲ್ವಿಗಳಾದ ಹಾಜಿ ಜಿಯಾವುದ್ದೀನ್ ಹಾಗೂ ಸಿರಾಜುದ್ದೀನ್ ಎಲ್ಲ ಮಸೀದಿಗಳ ಮುತುವಲ್ಲಿಗಳು ಪಾಲ್ಗೊಂಡಿದ್ದರು.