ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಕಾಲೇಜುಗಳು ಪರೀಕ್ಷೆಗಳ ನಿರ್ವಹಣೆಯಲ್ಲಿ ಮಾದರಿಯಾಗಿವೆ. ಆದರೆ ಕೆಲವು ಖಾಸಗಿ ಕಾಲೇಜುಗಳು ನೀತಿ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಅವ್ಯವಸ್ಥೆ ಉಂಟಾಗುತ್ತಿದೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ರಘು ಕುಮಾರ್ ಹೇಳಿದರು.ನಗರದ ಬೆಂಗಳೂರು ಉತ್ತರ ವಿವಿ ಸೆನೆಟ್ ಸದಸ್ಯ ಜಯದೀಪ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆಲವು ಖಾಸಗಿ ಕಾಲೇಜುಗಳು ತಮ್ಮ ಕಾಲೇಜಿಗೆ ಉತ್ತಮ ಫಲಿತಾಂಶ ಬರಲೆಂದು ಪರೀಕ್ಷಾ ನೀತಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದರು.
ಪರೀಕ್ಷಾ ನೀತಿ ಪಾಲಿಸುತ್ತಿಲ್ಲಉತ್ತಮ ಫಲಿತಾಂಶ ಬಂದರೆ ಮುಂದೆ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುತ್ತಾರೆ ಎಂಬ ವ್ಯಾಪಾರಿ ಮನೋವೃತ್ತಿ ಅಳವಡಿಸಿಕೊಳ್ಳುವ ಮೂಲಕ ಖಾಸಗಿ ಕಾಲೇಜುಗಳು ಶೈಕ್ಷಣಿಕ ವ್ಯವಸ್ಥೆಗಳಿಗೆ ಮಸಿ ಬಳಿಯುತ್ತಿವೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತ ಕಾಳಜಿ ಖಾಸಗಿ ಕಾಲೇಜುಗಳಿಗೆ ಇರಬೇಕು ಎಂದು ಹೇಳಿದರು.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷವು ಒಂದೇ ತನಿಖಾ ತಂಡಗಳನ್ನು ಕಾಲೇಜಿಗೆ ಹಾಕಿಸಿಕೊಂಡು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಾಸ್ ಕಾಫಿ ಮಾಡಿಸಿ ಶೇ.೧೦೦ ರಷ್ಟು ಫಲಿತಾಂಶ, ರ್ಯಾಂಕ್ಗಳನ್ನುಗಳಿಸುವುದು ಜೊತೆಗೆ ಮಾರ್ಕ್ಸ್ ಕಾರ್ಡ್ಗಳ ಹಗರಣ, (ಹ್ಯಾಕ್) ಸೇರಿದಂತೆ ಹಲವಾರು ಅಕ್ರಮಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದು ಹೇಳಿದರು.ಮೌಲ್ಯ ಮಾಪನದಲ್ಲಿ ಅಕ್ರಮ
ಬೆಂಗಳೂರು ಉತ್ತರ ವಿವಿ ಸೆನೆಟ್ ಸದಸ್ಯ ಜಯದೀಪ್ ಮಾತನಾಡಿ, ಕಳೆದ ವರ್ಷ ಪರೀಕ್ಷಾ ಮೌಲ್ಯ ಮಾಪನದಲ್ಲಿನ ಅಕ್ರಮಗಳ ಹಗರಣಗಳಿಗೆ ಸಂಬಂಧಿಸಿದಂತೆ ೧೦ ಮಂದಿಯ ವಿರುದ್ದ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿತ್ತು, ಆದರೆ ನಂತರದಲ್ಲಿ ಏನಾಯಿತು ಎಂಬುವುದು ತಿಳಿಯಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಬೆಂಗಳೂರು ಉತ್ತರ ವಿವಿ ಪರೀಕ್ಷೆಗಳನ್ನು ನಡೆಸಲು ಅರ್ಹ ಕಾಲೇಜುಗಳನ್ನು ಗುರುತಿಸಿ ಅನುಮತಿಸಬೇಕು, ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾ ಇರಬೇಕು, ಪರೀಕ್ಷಾ ಅಧಿಕಾರಿಗಳನ್ನು ಪ್ರತಿವರ್ಷವೂ ಬದಲಾಯಿಸಬೇಕು ಎಂದು ತಿಳಿಸಿದರು.ಇಂದು ಎಲ್ಲಾ ಕಾಲೇಜುಗಳಲ್ಲಿ ಕ್ಯಾಂಪಾಸ್ ಸೆಲೆಕ್ಷನ್ ಇದೆ. ಕೈಗಾರಿಕೆಗಳು ನಮ್ಮ ಜಿಲ್ಲೆಗೆ ಹೆಚ್ಚಾಗಿ ಬರುತ್ತಿರುವುದು ವರದಾನವಾಗಿದೆ. ಉದ್ಯೋಗದ ಸಮಸ್ಯೆ ಇರುವುದಿಲ್ಲ. ಅದರೆ ನಾವು ಪಡೆದ ಶಿಕ್ಷಣಕ್ಕೆ ತಕ್ಕನಾದ ಉದ್ಯೋಗವು ಸಿಗುವುದು ಅಪರೂಪವಾಗಿದೆ.ಇದಕ್ಕಾಗಿ ಕೌಶಲ ತರಬೇತಿ ಅಗತ್ಯ ಎಂದರು.ಈ ಸಂದರ್ಭದಲ್ಲಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಜಮೀರ್ ಅಹ್ಮದ್ ಇದ್ದರು.